ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಹೈಕೋರ್ಟ್ ಗೋಲ್ಡನ್ ಗೇಟ್ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಪ್ರಕರಣವೊಂದರ ವಿಚಾರಣೆ ವೇಳೆ ಮೌಖಿಕವಾಗಿ ಆ ರೀತಿ ಮಾತನಾಡಬಾರದಿತ್ತು. ಅವರು ಆಡಿರುವ ತಮ್ಮ ಮಾತುಗಳನ್ನು ಹಿಂತೆಗೆಯಲು ಹೇಳೋಣ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನುಡಿದರು.
ತೆರೆದ ನ್ಯಾಯಾಲಯದಲ್ಲಿ ಕಲಾಪದ ವೇಳೆ ಮುಖ್ಯ ನ್ಯಾ. ಗವಾಯಿ ಅವರಿಗೆ ಸುಪ್ರೀಂ ಕೋರ್ಟ್ ವಕೀಲ ರಾಕೇಶ್ ಶೂ ಎಸೆಯಲು ಯತ್ನಿಸಿದ್ದನ್ನು ಖಂಡಿಸಿ ಬುಧವಾರ ಹೈಕೋರ್ಟ್ನ ‘ಗೋಲ್ಡನ್ ಗೇಟ್’ ಮುಂಭಾಗ ‘ಬೆಂಗಳೂರು ವಕೀಲರ ಸಂಘ’ ಪ್ರತಿಭಟನೆ ನಡೆಸಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ‘ನ್ಯಾಯಾಂಗವು ಪ್ರಜಾಪ್ರಭುತ್ವದ ಅಡಿಗಲ್ಲು. ವಕೀಲರು ಶೂ ಎಸೆಯಲು ಯತ್ನಿಸಿದ ಕೃತ್ಯವು ಪ್ರಜಾಪ್ರಭುತ್ವದ ಕಂಬಗಳನ್ನು ಅಲ್ಲಾಡಿಸುವ ಅಪಾಯಕಾರಿ ಪ್ರಯತ್ನ. ಇದನ್ನು ಸಹಿಸಲು ಆಗದು. ಯಾರು ಏನೇ ಹೇಳಿದರೂ ಈ ಘಟನೆ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುತ್ತದೆ’ ಎಂದು ವಿಷಾದಿಸಿದರು.
ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ‘ನ್ಯಾಯಾಂಗವನ್ನು ದುರ್ಬಲಗೊಳಿಸಲು ನ್ಯಾಯಾಂಗದ ಮೇಲೆ ಅನೇಕ ಬಾರಿ ಹಲ್ಲೆಗಳು ನಡೆದಿವೆ. ಅಧಿಕಾರಸ್ಥರು ಸ್ವತಂತ್ರ ನ್ಯಾಯಾಂಗದ ಗಟ್ಟಿ ವ್ಯವಸ್ಥೆಯನ್ನು ಯಾವತ್ತೂ ಸಹಿಸುವುದಿಲ್ಲ. ಇಂತಹದನ್ನೆಲ್ಲಾ ನಾವು ಗಟ್ಟಿಯಾಗಿ ನಿಂತು ಎದುರಿಸಬೇಕು. ಶೂ ಎಸೆಯಲು ಯತ್ನಿಸಿದ ವಕೀಲರನ್ನು ಕೂಡಲೇ ಬಂಧಿಸಿ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್, ಖಜಾಂಚಿ ಶ್ವೇತಾ ರವಿಶಂಕರ್, ಸಂಘದ ಪದಾಧಿಕಾರಿಗಳಾದ ಕೆ.ಚಂದ್ರಕಾಂತ ಪಾಟೀಲ ಎಸ್.ರಾಜು, ಎಂ.ಚಾಮರಾಜ, ಆತ್ಮ ವಿ.ಹಿರೇಮಠ, ಪಿ.ಅರವಿಂದ ಕಾಮತ್, ತಮ್ಮಯ್ಯ ಮತ್ತು ಪದಾಂಕಿತ ಹಿರಿಯ ಡಿ.ಎಲ್.ಜಗದೀಶ್, ಜಿ.ಆರ್.ಮೋಹನ್, ವೆಂಕಟೇಶ ದೊಡ್ಡೇರಿ, ಮುನಿಗಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.