ADVERTISEMENT

ಮರ ಕಡಿಯಲು ಅನುಮತಿ ನೀಡಿದ್ದ ಪ್ರಕರಣ: ಮಡಿಕೇರಿ ವಲಯದ ಡಿಎಫ್‌ಒ ಅಮಾನತು

808 ಮರ ಕಡಿಯಲು ಅನುಮತಿ ನೀಡಿದ ಪ್ರಕರಣ ಕಾರಣ?

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 19:33 IST
Last Updated 14 ಜೂನ್ 2019, 19:33 IST
ಎಂ.ಎಲ್.ಮಂಜುನಾಥ
ಎಂ.ಎಲ್.ಮಂಜುನಾಥ   

ಮಡಿಕೇರಿ: ಸಮೀಪದ ಕೆ.ನಿಡುಗಣಿ ಗ್ರಾಮದಲ್ಲಿ ಮರ ಹನನ ಪ್ರಕರಣ ಸಂಬಂಧ ಮಡಿಕೇರಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್‌.ಮಂಜುನಾಥ ಅವರನ್ನು ಅಮಾನತು ಮಾಡಲಾಗಿದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಕಾರ್ಯಪಡೆ ಮುಖ್ಯಸ್ಥ) ಅವರು ಶುಕ್ರವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವಿರಾಜಪೇಟೆ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜು ಅವರಿಗೆ ಮಡಿಕೇರಿ ವಲಯದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಕಾರಣ ಏನು?:

ADVERTISEMENT

ಆದೇಶ ಪ್ರತಿಯಲ್ಲಿ ಅಮಾನತಿಗೆ ನಿರ್ದಿಷ್ಟ ಕಾರಣ ತಿಳಿಸಿಲ್ಲ. ಆದರೆ, ಕೆ.ನಿಡುಗಣಿ ಗ್ರಾಮದಲ್ಲಿ 808 ಮರಗಳ ಹನನಕ್ಕೆ ಡಿಎಫ್‌ಒ ಮಂಜುನಾಥ ಅವರು ಆದೇಶ ನೀಡಿದ್ದರು. ಕರ್ತವ್ಯ ಲೋಪದ ಕಾರಣಕ್ಕೆ ಅಮಾನತು ಮಾಡಲಾಗಿದೆ ಎನ್ನಲಾಗಿದೆ.

ಉದ್ಯಮಿಯೊಬ್ಬರು,ಅರಣ್ಯ ಇಲಾಖೆಯಿಂದಲೇ ಅನುಮತಿ ಪಡೆದು ನೂರಕ್ಕೂ ಹೆಚ್ಚು ಮರ ಕಡಿಸಿದ್ದರು. ನೇರಳೆ, ಹಲಸು, ಬೈನೆ ಮರಗಳನ್ನು ಕಡಿದು ಉರುಳಿಸಲಾಗಿತ್ತು. ಜೂನ್‌ 6ರಂದು ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಳಕ್ಕೆ ಮಾಜಿ ಸಚಿವ ಎಂ.ಸಿ. ನಾಣಯ್ಯ ನೇತೃತ್ವದಲ್ಲಿ ತೆರಳಿದ್ದ ಪರಿಸರ ಪ್ರೇಮಿಗಳು ಮರ ಕಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಗೃಹ ನಿರ್ಮಾಣ ಮಂಡಳಿಯ ಹೆಸರಿನಲ್ಲಿ ಜಮೀನು ಖರೀದಿಸಿ ರೆಸಾರ್ಟ್ ನಿರ್ಮಾಣ ಮಾಡಲಾಗುತ್ತಿದೆ ಎಂದೂ ಆರೋಪಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮರ ಕಡಿಯುವುದನ್ನು ಸ್ಥಗಿತಗೊಳಿಸಿ ವರದಿ ನೀಡುವಂತೆ ಕೊಡಗು ವೃತ್ತದ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ ಕುಮಾರ್‌ ಅವರಿಗೆ ಜೂನ್‌ 7ರಂದು ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.