ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ನಂದಿಪುರದ ಮಹೇಶ್ವರ ಸ್ವಾಮೀಜಿ ಅವರ ಸಹೋದರ, ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲ್ಲೂಕಿನ ನಾಗಠಾಣದ ನಿರ್ವಾಣಿ ಮಠದ ಪಿಠಾಧಿಪತಿ ರುದ್ರಪಶುಪತಿ ಶಿವಾಚಾರ್ಯ ಮಹಾರಾಜ ಸ್ವಾಮೀಜಿ (35) ಅವರನ್ನು ಶನಿವಾರ ತಡರಾತ್ರಿ ದುಷ್ಕರ್ಮಿಗಳು ಹತೈಗೈದ ಸುದ್ದಿ ತಿಳಿದು ಅವರ ಹುಟ್ಟೂರಾದ ತಾಲ್ಲೂಕಿನ ಗದ್ದಿಕೇರಿಯಲ್ಲಿ ಭಾನುವಾರ ನೀರವ ಮೌನ ಆವರಿಸಿತು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸಾಧುವಿನ ಹತ್ಯೆ
ಮಠದೊಂದಿಗೆ ವಿಶೇಷ ನಂಟು ಹೊಂದಿದ್ದರಿಂದ ತಾಲ್ಲೂಕಿನ ನಂದಿಪುರ ಗ್ರಾಮವು ಶೋಕದಲ್ಲಿ ಮುಳುಗಿದೆ. ಸ್ವಾಮೀಜಿ ಐದು ವರ್ಷಗಳಿಂದ ನಾಗಠಾಣದಲ್ಲಿ ಮಠದ ಪೀಠಾಧಿಪತಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಸ್ವಾಮೀಜಿ ಪದವಿ ಮುಗಿಸಿದ ಬಳಿಕ ದೀಕ್ಷೆ ಸ್ವೀಕರಿಸಿ, ನಾಗಠಾಣ ಮಠದ ಜವಾಬ್ದಾರಿ ವಹಿಸಿಕೊಂಡಿದ್ದರು. ಆಗಾಗ್ಗೆ ನಂದಿಪುರ ಮಠಕ್ಕೂ ಬಂದು ಹೋಗುತ್ತಿದ್ದರು. ಸಾಮೂಹಿಕ ವಿವಾಹ, ನಂದಿಪುರ ನುಡಿಹಬ್ಬ, ಕುಂಭೋತ್ಸವ ಅವರ ಸಾನ್ನಿಧ್ಯದಲ್ಲಿ ಜರುಗುತ್ತಿತ್ತು. ಅವರ ನಿಧನದಿಂದ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
‘ಯಾರೊಬ್ಬರ ವೈರತ್ವವನ್ನು ಕಟ್ಟಿಕೊಳ್ಳದ ತಾಯಿ ಹೃದಯದ ಸ್ವಾಮೀಜಿ ಅವರಾಗಿದ್ದರು. ಅವರ ಹತ್ಯೆ ಯಾಕಾಯಿತು ಗೊತ್ತಾಗುತ್ತಿಲ್ಲ’ ಎಂದು ಗ್ರಾಮದ ಪತ್ರೇಶ್ ನೋವಿನಿಂದ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.