ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಕೃಷ್ಣಾನದಿಯ ಕರಕಲಗಡ್ಡಿ ನಡುಗಡ್ಡೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ‘ಡ್ರೋಣ್’ ಮೂಲಕ ಔಷಧಿಗಳನ್ನು ತಲುಪಿಸಲಾಯಿತು.
ಕರಕಲಗಡ್ಡಿಯಲ್ಲಿ ಒಂದೇ ಕುಟುಂಬದ ನಾಲ್ವರು ಉಳಿದುಕೊಂಡಿದ್ದು, ಅವರಲ್ಲಿ ತಿಪ್ಪಣ್ಣ ಎಂಬುವರು ಪಾರ್ಶ್ವವಾಯು ಪೀಡಿತರು. ಅವರು ತೆಗೆದುಕೊಳ್ಳುತ್ತಿದ್ದ ಔಷಧಿ ಖಾಲಿಯಾಗಿದ್ದರಿಂದ ಅವುಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವಂತೆ ಉಪವಿಭಾಗಾಧಿಕಾರಿ ರಾಜಶೇಖರ ಡಂಬಾಳ ಅವರಿಗೆ ನಡುಗಡ್ಡೆ ಜನರು ಕೋರಿದ್ದರು.
‘ನಾರಾಯಣಪುರ ಜಲಾಶಯದಿಂದ 2.72 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದ್ದು, ನಡುಗಡ್ಡೆಗೆ ಬೋಟ್ನಲ್ಲಿ ಹೋಗುವುದು ಅಪಾಯಕಾರಿ’ ಎಂದು ಎನ್ಡಿಆರ್ಎಫ್ ಅಧಿಕಾರಿಗಳು ತಿಳಿಸಿದ್ದರು.
ಹಾಗಾಗಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರುರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅವರಿಗೆ ‘ಡ್ರೋಣ್’ ಬಳಕೆಗೆ ಸಹಕರಿಸಲು ಕೋರಿದರು. ಕೃಷಿ ತಾಂತ್ರಿಕ ಕಾಲೇಜಿನ ಡೀನ್ ವೀರನಗೌಡ, ಸಹಾಯಕ ಪ್ರಾಧ್ಯಾಪಕರಾದ ಅಭಿಷೇಕ್, ಸುನೀಲ್ ಶಿರವಾಳ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಡ್ರೋಣ್ ಕಾರ್ಯಾಚರಣೆ ನಡೆಸಿದರು.
ಪ್ರವಾಹದಿಂದ ಕರಕಲಗಡ್ಡಿ ಮತ್ತು ಮ್ಯಾದರಗಡ್ಡಿ ಎರಡುನಡುಗಡ್ಡೆಗಳಿಗೆ ಸಂಪರ್ಕ ಕಡಿತವಾಗಿದೆ. ಮ್ಯಾದರಗಡ್ಡಿಯಲ್ಲಿದ್ದ 13 ಪೈಕಿ 4 ಜನರನ್ನು ಸುರಕ್ಷಿತ ಜಾಗಕ್ಕೆ ಮೂರು ದಿನಗಳ ಹಿಂದೆಯೇ ಸ್ಥಳಾಂತರಿಸಲಾಗಿದೆ. ಡ್ರೋಣ್ ಮೂಲಕ ನಡುಗಡ್ಡೆ ಜನರಿಗೆ ಮಾತ್ರೆಗಳನ್ನು ತಲುಪಿಸುವ ವಿಡಿಯೋ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.