ADVERTISEMENT

ಬಳ್ಳಾರಿ ಅಭಿವೃದ್ಧಿ ವಿಚಾರ; ಕಾಂಗ್ರೆಸ್‌ಗೆ ಸವಾಲು ಹಾಕಿದ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 7:42 IST
Last Updated 24 ಅಕ್ಟೋಬರ್ 2018, 7:42 IST
ಬಿ. ಶ್ರೀರಾಮುಲು, ಡಿ.ಕೆ. ಶಿವಕುಮಾರ್‌
ಬಿ. ಶ್ರೀರಾಮುಲು, ಡಿ.ಕೆ. ಶಿವಕುಮಾರ್‌   

ಬಳ್ಳಾರಿ: ಜಿಲ್ಲೆಯ ಅಭಿವೃದ್ಧಿಗೆ ರಾಮುಲು ಏನೂ ಮಾಡಿಲ್ಲ ಎನ್ನುವ ಕಾಂಗ್ರೆಸ್ ನಾಯಕರು ಚರ್ಚೆಗೆ ಬರಲಿ. ಕಾಂಗ್ರೆಸ್ ನಾಯಕರು ಎಷ್ಟು ಅನುದಾನ ತಂದಿದ್ದಾರೆ ಎಂದು ಶ್ವೇತ ಪತ್ರ ಹೊರಡಿಸಲಿ. ನಾವು ತಂದಿರುವ ಅನುದಾನದ ಬಗ್ಗೆ ದಾಖಲೆ ಸಮೇತ ವಿವರಣೆ ನೀಡಲು ಸಿದ್ಧ. ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ‌. ಶ್ರೀರಾಮುಲು ಸವಾಲು ಹಾಕಿದರು.

ನಗರದಲ್ಲಿ‌ ಬುಧವಾರ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಒಂದು ವೇಳೆ ಕಾಂಗ್ರೆಸ್ ನಾಯಕರು ನಮಗಿಂತ ಒಂದು ರೂಪಾಯಿ ಹೆಚ್ಚಿನ ಅನುದಾನ ತಂದಿದ್ದರೂ ಬಿಜೆಪಿ ಅಭ್ಯರ್ಥಿ ಜೆ ಶಾಂತರನ್ನು ನಿವೃತ್ತಿಗೊಳಿಸುತ್ತೇವೆ. ಈ ಚುನಾವಣೆಯೇ ಬೇಡ ಎಂದು ಸವಾಲು ಹಾಕಿದರು.

ಸವಾಲು ಸ್ವೀಕರಿಸಲು ಸಿದ್ಧ: ಡಿ.ಕೆ. ಶಿವಕುಮಾರ್‌

ADVERTISEMENT

ಕೆಲಹೊತ್ತಿನ ಬಳಿಕ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಡಿ.ಕೆ.ಶಿವಕುಮಾರ್,ಬಿ. ಶ್ರೀರಾಮುಲು ಸವಾಲನ್ನು ಸ್ವೀಕರಿಸಲು ಸಿದ್ಧ. ಮಾಧ್ಯಮದವರೇ ಚರ್ಚೆ ಏರ್ಪಡಿಸಲಿ. ನಾನು ಬರಲು ಸಿದ್ಧ ಎಂದರು.

‘ಇಡೀ ದೇಶದಲ್ಲಿ ಪರಿಶಿಷ್ಟ ಸಮುದಾಯಕ್ಕೆ 27 ಸಾವಿರ ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿರುವ ಏಕೈಕ ರಾಜ್ಯ ಕರ್ನಾಟಕ. ಅದು ಸಾಧ್ಯವಾಗಿದ್ದು ಕಾಂಗ್ರೆಸ್ ಪಕ್ಷದಿಂದ. ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಆ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸ ಇದೆ. ಶ್ರೀರಾಮುಲು ಅವರೇ ಅನುದಾನ ತಂದಿದ್ದಾರೆ, ಮಾಡಿದ್ದಾರೆ, ಇಟ್ಕೊಂಡಿದ್ದಾರೆ' ಎಂದು ವ್ಯಂಗ್ಯವಾಡಿದರು.

ಶ್ರೀರಾಮುಲು ಅವರ ಅಣ್ಣ ಹುಟ್ಟಾ ಕಾಂಗ್ರೆಸ್ಸಿಗರು. ಸೋನಿಯಾ ಗಾಂಧಿ ಬಳ್ಳಾರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಶ್ರೀರಾಮುಲು ಅಣ್ಣ ಕಾಂಗ್ರೆಸ್ ಧ್ವಜ ಹಿಡಿದು ಬುಲೆಟ್ ಮೇಲೆ ಓಡಾಡುವುದನ್ನು ನೋಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಕಾರ್ಪೊರೇಟರ್ ಆಗಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.