ಗುಲಾಮ (ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಕನ್ನಡಿಗರೆಂದೂ ಬ್ರಿಟಿಷರ ಸೇವೆ ಮಾಡಲಿಲ್ಲ. ದಕ್ಷಿಣ ಭಾರತದಲ್ಲಿ ಬ್ರಿಟಿಷರ ಸೇವೆ ಮಾಡಿದವರು ತಮಿಳರು. ಬೆಂಗಳೂರಿನ ಕಂಟೋನ್ಮೆಂಟ್ನಂತಹ ಪ್ರದೇಶದಲ್ಲಿ ದಟ್ಟವಾಗಿದ್ದ ತಮಿಳು ಭಾಷಿಕರು ಬ್ರಿಟಿಷರ ಗುಲಾಮರಾಗಿದ್ದರು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ.ಅರುಣ್ ಹೇಳಿದರು.
‘ಬೆಂಗಳೂರು ವಕೀಲರ ಸಂಘ’ವು ಮಂಗಳವಾರ ಹೈಕೋರ್ಟ್ನ ವಕೀಲರ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕನ್ನಡ ನುಡಿ ಹಬ್ಬ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಹೊರಗಿನಿಂದ ಬಂದವರು ಇಲ್ಲಿಯ ಭಾಷೆ ಕಲಿಯದೇ ಹೋದರೆ ಅದು ದ್ರೋಹದ ಕೆಲಸ’ ಎಂದರು.
‘ಇಂದು ಬೆಂಗಳೂರಿನ ಕೋರಮಂಗಲ ಸೇರಿದಂತೆ ಅನೇಕ ಕಡೆ ಕನ್ನಡದ ಸೊಗಡೇ ಇಲ್ಲದಂತಾಗಿದೆ. ಇಲ್ಲೆಲ್ಲಾ ಅನ್ಯರೇ ತುಂಬಿಕೊಂಡಿದ್ದಾರೆ. ಇಂತಹ ವಾತಾವರಣದಿಂದಲೇ ಬೆಂಗಳೂರಿನ ಕೆರೆ ಕಟ್ಟೆಗಳೆಲ್ಲಾ ನಾಶವಾಗಿವೆ’ ಎಂದು ನ್ಯಾಯಮೂರ್ತಿ ಅರುಣ್ ಹೇಳಿದರು.
‘ತಮಿಳು, ಒಡಿಯಾ ಮತ್ತು ಕನ್ನಡ ಭಾಷೆ ಹೊರತುಪಡಿಸಿದರೆ ಬಿಟ್ಟರೆ ಸುದೀರ್ಘ ಇತಿಹಾಸದ ಬೇರೆ ಭಾಷೆ ಇಲ್ಲ. ಭಾಷೆ ಭದ್ರ ಕೋಟೆ ಇದ್ದ ಹಾಗೆ. ಸಂವಿಧಾನದ ಎಲ್ಲ ಆಶಯಗಳನ್ನು ಕನ್ನಡ ಸಾಹಿತ್ಯ ಒಳಗೊಂಡಿದೆ’ ಎಂದರು.
ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ಸಾಹಿತಿ ಗೊ.ರು.ಚನ್ನಬಸಪ್ಪ, ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಎಂ.ಟಿ ಹರೀಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.