ವಿಜಯಪುರ: ವರ್ಗಾವಣೆಯ ಆದೇಶ ಪತ್ರ ನೀಡಲು ಪ್ರತಿ ಶಿಕ್ಷಕರಿಂದ ₹2 ಸಾವಿರ ಪಡೆಯುವ ಬಗ್ಗೆ ಮೊಬೈಲ್ನಲ್ಲಿ ಚರ್ಚಿಸಿರುವ ವಿಜಯಪುರ ತಾಲ್ಲೂಕು ಮಖನಾಪುರ ತದ್ದೇನರಿತೋಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕಮಲ ರಾಠೋಡ ಅವರಿಗೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಸೂಚನೆಯಂತೆ ಡಿಡಿಪಿಐ ನೋಟಿಸ್ ನೀಡಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್, ‘ಹೆಚ್ಚುವರಿ ಆಯುಕ್ತರ ಆದೇಶದಂತೆ ಕಮಲ ರಾಠೋಡ ಅವರಿಗೆ ನೋಟಿಸ್ ನೀಡಲಾಗಿದೆ. ಉತ್ತರ ಬಂದ ಬಳಿಕ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ತಿಳಿಸಿದರು.
ಸಂಭಾಷಣೆಯಲ್ಲಿ ಏನಿದೆ?: ಕಮಲ ರಾಠೋಡ ಅವರು, ಇನ್ನೊಬ್ಬ ಶಿಕ್ಷಕರೊಂದಿಗೆ ಮೊಬೈಲ್ನಲ್ಲಿ ಮಾತನಾಡಿ, ‘ರಿಲೀವ್ ಆರ್ಡರ್ ಕೊಡಲು ₹2ಸಾವಿರ ಫಿಕ್ಸ್ ಮಾಡ್ಯಾರ್. ಎಲ್ಲಾ ನನಗೆ ಒಪ್ಪಿಸಿದಾರ. ಬೀಳಗಿ (ಕ್ಲರ್ಕ್ ಕಂ ಟೈಪಿಸ್ಟ್–ಎನ್.ಎ.ಬೀಳಗಿ) ಸಾಹೇಬ ಕಡೆ ಕೊಟ್ಟು ಬಂದೀನಿ ಎಲ್ಲಾ’ ಎಂದು ಹೇಳಿದ್ದಾರೆ.
ಇದಕ್ಕೆ ಆ ಶಿಕ್ಷಕ, ‘ನೀತಿ ಸಂಹಿತೆ ಜಾರಿ ಆದ್ರ ತೊಂದರೆ ಅಕ್ಕೈತಿ’ ಎಂದಿದ್ದಕ್ಕೆ, ‘ನನ್ನ ಕೈಯಾಗ ಕೊಟ್ಟ ಬಿಡ್ರಿ, ಸರ್ ಕಡೆ ನಾ ಕೊಟ್ಟ ಬಿಡ್ತೇನ್ರಿ, ನಾಳೆ ಸಿಗ್ತೀರಿ, ನಾ ಇಲ್ಲೇ ಇರ್ತೀನಿ. ಎಲ್ಲಾರು ಎರಡೆರಡ ಸಾವಿರ ರೂಪಾಯಿ ಕೊಟ್ಟಾರ ಸರ್. ಬೀಳಗಿಗೆ ಮುಟ್ಟಿಸಿದರ ಅಂವ ಎಲ್ಲಾ ಸಜ್ಜ ಮಾಡಿ ಅವಂಗ (ಬಿಇಒಗೆ) ಮುಟ್ಟಸ್ತಾನ’ ಎಂದು ಕಮಲ ರಾಠೋಡ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.