ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಪರಸ್ಪರ, ಕೋರಿಕೆ, ಕಡ್ಡಾಯ ವರ್ಗಾವಣೆಗಳಿಗೆ ಸಂಬಂಧಪಟ್ಟ ಅರ್ಜಿ ಸಲ್ಲಿಕೆ ಇದೇ 20ರವರೆಗೆ ನಡೆಯಲಿದೆ. ಆದರೆ, ಮೊದಲ ದಿನವೇ(ಬುಧವಾರ) ಸಾಫ್ಟ್ವೇರ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅರ್ಜಿ ಸಲ್ಲಿಸಲು ಶಿಕ್ಷಕರು ಪರದಾಡಿದರು.
ಕೆಲವು ಜಿಲ್ಲೆಗಳಲ್ಲಿ ಆನ್ಲೈನ್ ಅರ್ಜಿ ಸಲ್ಲಿಕೆಗೆ ಸಮಸ್ಯೆಯಾಯಿತುಎಂದು ಶಿಕ್ಷಕರು ದೂರಿದರು. ‘ಮೊದಲ ದಿನ ಸಣ್ಣಪುಟ್ಟ ದೋಷ ಕಾಣಿಸಿಕೊಂಡಿದ್ದು, ಸರಿಪಡಿಸಲಿದ್ದೇವೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಕೆಲವು ವರ್ಷಗಳ ಬಳಿಕ ಈ ಪ್ರಕ್ರಿಯೆ ಆರಂಭಿಸಿರುವುದು ಸ್ವಾಗತಾರ್ಹ. ಆದರೆ ಈ ಬಾರಿ 10 ವರ್ಷ ಕಡ್ಡಾಯ ಸೇವೆ ಸಲ್ಲಿಸಿರಬೇಕು ಎಂಬ ನಿಯಮ ರೂಪಿಸಿರುವುದರಿಂದಹೈದರಾಬಾದ್ ಕರ್ನಾಟಕ ಭಾಗದ ಶಿಕ್ಷಕರಿಗೆ ಭಾರಿ ಅನ್ಯಾಯ ಆಗಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೈದರಾಬಾದ್ ಕರ್ನಾಟಕದಲ್ಲಿ 371 ಜೆ ಜಾರಿಗೆ ಬಂದಿರುವುದು 2015ರಲ್ಲಿ. ಅಲ್ಲಿಂದ ನಂತರ ನೇಮಕಗೊಂಡವರಿಗೆ ಈ ನಿಯಮ ರೂಪಿಸಿದರೆ ತಪ್ಪೇನಿಲ್ಲ, ಆದರೆ ಅದಕ್ಕಿಂತ ಹಿಂದಿನವರಿಗೂ ಈ ನಿಯಮ ಕಡ್ಡಾಯಗೊಳಿಸಿದ್ದರಿಂದ 6 ಸಾವಿರಕ್ಕೂ ಅಧಿಕ ವರ್ಗಾವಣೆ ಆಕಾಂಕ್ಷಿಗಳಿಗೆ ವರ್ಗಾವಣೆಯ ಅವಕಾಶ ತಪ್ಪಿ ಹೋಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.