ಬೆಂಗಳೂರು: ಜಿಎಸ್ಟಿಯಲ್ಲಿ (ಸರಕು ಮತ್ತು ಸೇವಾ ತೆರಿಗೆ) ರಾಜ್ಯದ ಪಾಲು ಪಡೆಯಲು ಸಂಸದರಾಗಿ ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಮಾತನಾಡಿ ಎಂದು ಸಂಸದ ತೇಜಸ್ವಿ ಸೂರ್ಯಗೆ ಕಾಂಗ್ರೆಸ್ ಸವಾಲೆಸೆದಿದೆ.
ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ವೇಳೆ ಕೊಯಮತ್ತೂರಿನ ಹೋಟೆಲ್ನಲ್ಲಿ ಕ್ಯಾಷಿಯರ್ ನಿರಾಕರಿಸಿದ್ದರೂ ಬಿಲ್ ಪಾವತಿಸಿದ್ದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ಡಿಎಂಕೆ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಕರ್ನಾಟಕ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ.
‘ಹೋಟೆಲ್ನಲ್ಲಿ ನೀವು ತಿಂದಿರುವುದಕ್ಕೆ ಬಿಲ್ ಪಾವತಿಸಿರುವುದು ಸಹಜ. ಆ ಬಗ್ಗೆ ಹೆಮ್ಮೆಪಡುವುದರಿಂದ ಅನುಕೂಲವಿಲ್ಲ. ಬದಲಿಗೆ, ಜಿಎಸ್ಟಿಯಲ್ಲಿ ರಾಜ್ಯದ ಪಾಲು ಪಡೆಯಲು ಒಬ್ಬ ಸಂಸದರಾಗಿ ಏನು ಮಾಡುತ್ತಿದ್ದೀರಿ ಹೇಳಿ. ಆದಾಗ್ಯೂ ನಿಮಗೆ ದೊಡ್ಡ ಬಿಲ್ಗಳ ಬಗ್ಗೆ ಮಾತನಾಡಬೇಕು ಎಂದಿದ್ದಲ್ಲಿ ‘ಸ್ಕ್ಯಾನಿಯಾ ಬಿಲ್ (ಸ್ಕ್ಯಾನಿಯಾ ಬಸ್ ಹಗರಣ)’ ಬಗ್ಗೆ ಬೆಳಕು ಚೆಲ್ಲುವ ಕಾಳಜಿ ತೋರಿ!’ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕ್ಯಾಷಿಯರ್ ನಿರಾಕರಿಸಿದ್ದರೂ ಹೋಟೆಲ್ನಲ್ಲಿ ಬಿಲ್ ಪಾವತಿಸಿದ್ದ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, 'ಎಲ್ಲರನ್ನು ಗೌರವಿಸುವ ಮತ್ತು ಎಲ್ಲರನ್ನೂ ರಕ್ಷಿಸುವ ಪಕ್ಷ ಬಿಜೆಪಿ. ಸಣ್ಣ ವ್ಯಾಪಾರಿಗಳಿಂದಲೂ ರೋಲ್-ಕಾಲ್ ಮಾಡಲು ನಾವು ಡಿಎಂಕೆ ಅಲ್ಲ' ಎಂದು ಉಲ್ಲೇಖಿಸಿದ್ದರು. ಇದಕ್ಕೆ ಹೋಟೆಲ್ ಆಡಳಿತ ಮಂಡಳಿ ಫೇಸ್ಬುಕ್ನಲ್ಲಿ ನಯವಾಗಿಯೇ ತಿರುಗೇಟು ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.