ADVERTISEMENT

ಡಿಕೆಶಿಯಿಂದ ರೇವಂತ್ ರೆಡ್ಡಿಗೆ ರಾಜಕೀಯ ಪಾಠ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 21:09 IST
Last Updated 5 ಜುಲೈ 2021, 21:09 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ರಘುವೀರ ರೆಡ್ಡಿ ಮತ್ತು ರೇವಂತ್ ರೆಡ್ಡಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ರಘುವೀರ ರೆಡ್ಡಿ ಮತ್ತು ರೇವಂತ್ ರೆಡ್ಡಿ   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ರೇವಂತ್ ರೆಡ್ಡಿ, ಆ ರಾಜ್ಯದ ವಿರೋಧ ಪಕ್ಷದ ನಾಯಕ ರಘುವೀರ ರೆಡ್ಡಿ ಸೋಮವಾರ ಭೇಟಿಯಾಗಿದ್ದರು.

ಸದಾಶಿವನಗರದಲ್ಲಿನ ಶಿವಕುಮಾರ್‌ ನಿವಾಸಕ್ಕೆ ಬೆಳಿಗ್ಗೆ ಬಂದ ರೇವಂತ್, ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದರು. ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿ ವರ್ಷ ಪೂರೈಸಿದ ಶಿವಕುಮಾರ್ ಅವರನ್ನು ಅಭಿನಂದಿಸಿದರು.

ಕಾಂಗ್ರೆಸ್ ಸಂಸದರೂ ಆಗಿರುವ ಯುವ ನಾಯಕ ರೇವಂತ್ ರೆಡ್ಡಿ, ಜೂನ್‌ 3ರಂದು ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ಕಳಪೆ ಸಾಧನೆ ಮಾಡಿದ ಕಾರಣ, ಅಧ್ಯಕ್ಷರಾಗಿದ್ದ ಎಂ.ಉತ್ತಮ್ ಕುಮಾರ್ ರೆಡ್ಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಆ ಸ್ಥಾನಕ್ಕೆ ರೇವಂತ್ ರೆಡ್ಡಿ ಆಯ್ಕೆ ಆಗಿದ್ದಾರೆ.

ADVERTISEMENT

‘ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್‌ ಅಳವಡಿಸಿಕೊಂಡಿರುವ ಕಾರ್ಯತಂತ್ರಗಳು, ಎದುರಾದ ಉಪಚುನಾವಣೆಗಳಲ್ಲಿ ನಡೆಸಿದ ತಂತ್ರಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸ ಪಡೆದುಕೊಂಡು ಪಕ್ಷವನ್ನು ಸಂಘಟಿಸಿದ ಬಗ್ಗೆ ರೇವಂತ್ ರೆಡ್ಡಿ ಮಾಹಿತಿ ಪಡೆದುಕೊಂಡರು’ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.