ADVERTISEMENT

ಡಿಕೆಶಿ ಜಾತಿ ವ್ಯಾಮೋಹದಿಂದ ಎಚ್‌ಡಿಕೆ ಪರ ಮಾತನಾಡುತ್ತಿರಬಹುದು: ಎಂ.ಬಿ.ಪಾಟೀಲ

ದೂರವಾಣಿ ಕದ್ದಾಲಿಕೆ ವಿಚಾರ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 14:59 IST
Last Updated 16 ಆಗಸ್ಟ್ 2019, 14:59 IST
   

ಅಥಣಿ (ಬೆಳಗಾವಿ ಜಿಲ್ಲೆ): ‘ದೂರವಾಣಿ ಕದ್ದಾಲಿಕೆ ಆಗಿದೆ ಎಂದು ನಾನು ಹೇಳಿಲ್ಲ. ತನಿಖೆ ನಡೆಸಿ ಎಂದಷ್ಟೇ ಹೇಳಿದ್ದೇನೆ. ಆದರೆ, ಈ ವಿಷಯದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಜಾತಿ ವ್ಯಾಮೋಹದಿಂದ ಜೆಡಿಎಸ್‌ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಎಚ್‌.ಡಿ. ದೇವೇಗೌಡರ ಪರವಾಗಿ ಮಾತನಾಡುತ್ತಿರಬಹುದು’ ಎಂದು ಹಿಂದಿನ ಗೃಹಸಚಿವ, ಶಾಸಕ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಶಿವಕುಮಾರ್‌ ಅವರು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕುಮಾರಸ್ವಾಮಿ, ದೇವೇಗೌಡರು ಅಥವಾ ಒಕ್ಕಲಿಗರನ್ನು ಓಲೈಸಿಕೊಳ್ಳಲು ಅವರು ಜಾತಿ ರಾಜಕಾರಣ ಮಾಡುತ್ತಿರಬಹುದು. ನನಗೆ ಆ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದರು.

‌‘ನಾನು ಗೃಹ ಸಚಿವನಾಗಿದ್ದ ಅವಧಿಯಲ್ಲೇನಾದರೂ ದೂರವಾಣಿ ಕದ್ದಾಲಿಕೆ ಆಗಿದೆಯೇ ಎಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಿಚಾರಿಸಿದೆ. ಕೆಲವರು ಇಲ್ಲ ಎಂದರು; ಕೆಲವರು ಆಗಿರಬಹುದು ಎನ್ನುವ ಸಂಶಯ ವ್ಯಕ್ತಪಡಿಸಿದರು. ಇದನ್ನೇ ನಾನು ಮಾಧ್ಯಮದ ಎದುರು ಹೇಳಿದ್ದೆ. ಆದರೆ, ನಾನು ರಾಜಕಾರಣ ಮಾಡುತ್ತಿದ್ದೇನೆ ಎಂದು ಶಿವಕುಮಾರ್‌ ಹೇಳಿರುವುದು ಸರಿಯಲ್ಲ. ನನ್ನ ಬಗ್ಗೆ ಅವರು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಬ್ಬರೂ ಒಂದೇ ಪಕ್ಷದಲ್ಲಿದ್ದೇವೆ. ಬೇರೆ ರಾಜಕಾರಣ ಮಾಡುವ ಪ್ರಶ್ನೆ ಬರುವುದಿಲ್ಲ’ ಎಂದು ಕೇಳಿದರು.

ADVERTISEMENT
ಅಥಣಿ ಪ್ರವಾಸಿ ಮಂದಿರದಲ್ಲಿ ವಿಧಾನಸಬಾ ಶಾಸಕರುಗಳು

‘ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡುವಂತಹ ವ್ಯಕ್ತಿಯಲ್ಲ. ಇಂಥವರೇ ಮಾಡಿರಬಹುದು ಎಂದು ದೂರುವುದಿಲ್ಲ. ಈ ಕುರಿತು 3 ತಿಂಗಳ ಅವಧಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಸತ್ಯವಾಗಿದ್ದರೆ ಯಾರು ಮಾಡಿದ್ದರು, ಅಧಿಕಾರಿಗಳಾ, ಗೃಹ ಸಚಿವ ಎಂ.ಬಿ. ಪಾಟೀಲ ಮಾಡಿಸಿದರಾ? ಎನ್ನುವುದು ಹೊರಬರಬೇಕು’ ಎಂದರು.

ಶಾಸಕರಾದ ಸತೀಶ ಜಾರಕಿಹೊಳಿ, ಗಣೇಶ ಹುಕ್ಕೇರಿ, ಕಾಂಗ್ರೆಸ್‌ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡರಾದ ಸದಾಶಿವ ಬುಟಾಳಿ, ಬಸವರಾಜ ಬುಟಾಳಿ, ಸುನೀಲ ಸಂಕ, ದರೆಪ್ಪ ಠಕ್ಕಣ್ಣವರ, ನಿಶಾಂತ ದಳವಾಯಿ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.