ಧಾರವಾಡ: 'ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷ ಸಂದಿವೆ, ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ ಈಗಿದೆ ಬಿಜೆಪಿಯವರು ಈ ಬಗ್ಗೆ ಚರ್ಚಿಸುತ್ತಾರಾ?' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಷಯಾಧಾರಿತ ಸಮಸ್ಯೆಗಳು ಜನರಿಗೆ ಗೊತ್ತಾಗಬಾರದು, ಪಹಲ್ಗಾಮ್, ಪುಲ್ವಾಮಾದಂತಹ ದಾಳಿಗಳ ಬಗ್ಗೆ ಯಾರು ಕೇಳಬಾರದು ಎಂದು 'ತುರ್ತುಪರಿಸ್ಥಿತಿ:50 ವರ್ಷ' ಇಂಥ ಅಭಿಯಾನ ನಡೆಸುತ್ತಾರೆ ಎಂದು ಕುಟುಕಿದರು.
'ಕೇಂದ್ರದಲ್ಲಿ 11 ವರ್ಷಗಳಿಂದ ಬಿಜೆಪಿ ಅಧಿಕಾರ ನಡೆಸುತ್ತಿದೆ. ಜನರಿಗೆ ದೇಶದಲ್ಲಿನ ಆಗುಹೋಗುಗಳ ಬಗ್ಗೆ ಮಾಹಿತಿ ಇರಬಾರದು ಎಂದು ಇಂಥ ಕಾರ್ಯಕ್ರಮ ಮಾಡುತ್ತಾರೆ' ಎಂದು ಛೇಡಿಸಿದರು.
'ಇತರ ದೇಶಗಳೊಂದಿಗೆ ನಮ್ಮ ದೇಶವನ್ನು ಹೋಲಿಕೆ ಮಾಡುವುದಿಲ್ಲ, ನಮ್ಮ ದೇಶವೇ 'ಗ್ರೇಟ್', ನಮ್ಮ ಪ್ರಧಾನಿಯೇ (ನರೇಂದ್ರ ಮೋದಿ) 'ಗ್ರೇಟ್' ಎಂದು ಬಿಜೆಪಿಯವರು ಸದಾ ಹೇಳುತ್ತಾರೆ. 50 ವರ್ಷದ ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ಈಗ ಚರ್ಚಿಸುವುದು ಪ್ರಸ್ತುತವೇ? ಅದರ ಅಗತ್ಯ ಇದೆಯಾ? ಎಂದು ಬಿಜೆಪಿಯವರು ಹೇಳಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.