ಗೋಣಿಕೊಪ್ಪಲು: ಲಾಕ್ಡೌನ್ ಹಿನ್ನೆಲೆಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಿದ್ದು, ಅರಣ್ಯದಂಚಿನ ರಸ್ತೆಗಳಲ್ಲಿ ವನ್ಯಜೀವಿಗಳು ಸ್ವಚ್ಚಂದವಾಗಿ ವಿಹಾರ ನಡೆಸುತ್ತಿವೆ.
ಹುಣಸೂರು – ಗೋಣಿಕೊಪ್ಪಲು ನಡುವಿನ ಅಂತರ ರಾಜ್ಯ ಹೆದ್ದಾರಿಯಲ್ಲಿ ಹುಲಿಯೊಂದು ಹೆದ್ದಾರಿ ಬದಿಯ ಆನೆ ಕಂದಕದ ದಡದಲ್ಲಿ ಮಲಗಿರುವುದು ಗೋಚರಿಸಿದೆ.
ಇದನ್ನು ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾಗರಹೊಳೆ ಅರಣ್ಯದೊಳಗೆ ಅಳ್ಳೂರಿನಿಂದ ತಿತಿಮತಿ ವರೆಗೆ 11 ಕಿ.ಮೀ ದೂರ ಹೆದ್ದಾರಿ ಅರಣ್ಯದೊಳಗೆ ಹಾದು ಹೋಗಿದೆ. ಲಾಕ್ಡೌನ್ಗಿಂತ ಮೊದಲು ವಾಹನಗಳು ನಿರಂತರವಾಗಿ ಓಡಾಡುತ್ತಿದ್ದವು.
ಇದೀಗ ಎರಡು ತಿಂಗಳಿನಿಂದ ಯಾವುದೇ ವಾಹನ ಸಂಚಾರ ಇಲ್ಲದಿರುವುದರಿಂದ ಹುಲಿ, ಕಾಡುಕೋಣ ಮೊದಲಾದ ವನ್ಯಜೀವಿಗಳು ನಿರಂತರವಾಗಿ ಓಡಾಡುತ್ತಿವೆ. ವಾಹನಗಳ ಸಂಚಾರ ಮತ್ತು ಪ್ರಯಾಣಿಕರ ಕಿರುಚಾಟ ಇಲ್ಲದಿರುವುದರಿಂದ ಹುಲಿ ಆರಾಮಾಗಿ ಮಲಗಿಕೊಂಡಿದೆ.
‘ಹುಣಸೂರು ವನ್ಯಜೀವಿ ವಿಭಾಗದಲ್ಲಿ ಹುಲಿ ಗೋಚಸಿರುವುದು ಕಂಡುಬಂದಿದೆ. ವಾಸ್ತವವಾಗಿ ಈ ರೀತಿ ಪ್ರಯಾಣಿಕರು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ವನ್ಯಜೀವಿ ಕಾಯ್ದೆಗೆ ವಿರುದ್ಧವಾಗಿದೆ’ ಎಂದು ಮತ್ತಿಗೋಡು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವಾನಂದ ಲಿಂಗಾಣಿ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.