ಮೈಸೂರು: ‘ಹೊರಗೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸದನದ ಒಳಗೆ ಕಾಯ್ದೆಯನ್ನು ಬೆಂಬಲಿಸುವ, ಹೋರಾಟದ ಹಿನ್ನೆಲೆಯಿಂದ ಬಂದ ಎಚ್.ಡಿ.ದೇವೇಗೌಡರ ಈ ಕೆಲಸವು ಸ್ವತಃ ಅವರೇ ತಲೆ ತಗ್ಗಿಸುವ ಸಂಗತಿ. ಇವರನ್ನು ಕಾಲ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಟೀಕಾ ಪ್ರಹಾರ ನಡೆಸಿದ್ದಾರೆ.
ಭೂಸುಧಾರಣೆ ಮಸೂದೆಗೆ ಜೆಡಿಎಸ್ ನೀಡಿದ ಬೆಂಬಲ ಖಂಡಿಸಿ ಟ್ವೀಟ್ ಮಾಡಿರುವ ಅವರು, ‘ರಾಜಕೀಯ ಪ್ರಕ್ರಿಯೆಗಳ ಆಚೆಗೆ ಸಾಮಾಜಿಕ ಬದ್ಧತೆ ಇಲ್ಲದಿದ್ದರೆ ಮಣ್ಣಿನ ಮಗನಾದರೂ ಅಷ್ಟೇ, ಯಾರಾದರೂ ಅಷ್ಟೇ’ ಎಂದು ಹರಿಹಾಯ್ದಿದ್ದಾರೆ.
ಕರಂದ್ಲಾಜೆ ವಿರುದ್ಧ ಟೀಕೆ: ‘ರಾಜಕೀಯ ಬದುಕಿನಲ್ಲಿ ಅಭಿವೃದ್ಧಿ ಎಂಬ ಶಬ್ದವನ್ನೇ ಆಡದ–ಕೇಳದ ಸಂಸದೆ ಶೋಭಾ ಕರಂದ್ಲಾಜೆ ಅವರು, ರೈತರನ್ನು ದೇಶದ್ರೋಹಿಗಳಿಗೆ ಹೋಲಿಸಿರುವುದು ಕೇಡುಗಾಲದ ಪರಮಾವಧಿ. ರೈತರ ಭವಿಷ್ಯವನ್ನು ಕತ್ತಲೆಗೆ ನೂಕಿ, ಮತ್ತೆ ಅವರನ್ನೇ ದೇಶದ್ರೋಹಿ ಎನ್ನುತ್ತಿರುವ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.