ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿರುದ್ಧದಅಕ್ರಮಗಳು ಮತ್ತು ದುರ್ನಡತೆ ಆರೋಪಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮ ಜರುಗಿಸುವಲ್ಲಿ ಆಗುವ ವಿಳಂಬವನ್ನು ತಡೆಗಟ್ಟಲು ಗರಿಷ್ಠ ಕಾಲಮಿತಿ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
ನೌಕರನ ದುರ್ನಡತೆ ಬಗ್ಗೆ ವಿಚಾರಣೆ ನಡೆಸಿ ಶಿಸ್ತಿನ ಕ್ರಮ ಜರುಗಿಸಲು ಒಟ್ಟು 9 ತಿಂಗಳ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ. ಸರ್ಕಾರದ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರು ಈ ಸೂಚನೆಗಳನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಅಕ್ರಮಗಳು ಮತ್ತು ದುರ್ನಡತೆಗಳು ಶಿಸ್ತು ಪ್ರಾಧಿಕಾರದ ಗಮನಕ್ಕೆ ಬಂದ ದಿನಾಂಕದಿಂದ ದೋಷಾರೋಪಣ ಪಟ್ಟಿ ತಯಾರಿಸಲು ದಾಖಲೆಗಳನ್ನು ಪಡೆಯಲು/ ಆರಂಭಿಕ ತನಿಖೆ, ವಿಚಾರಣೆ ಅಂತಿಮಗೊಳಿಸಲು/ ದೋಷಾರೋಪಣ ಪಟ್ಟಿ ತಯಾರಿಸಿ ಜಾರಿಗೊಳಿಸಲು 1 ತಿಂಗಳು ನಿಗದಿ ಮಾಡಲಾಗಿದೆ.
ದೋಷಾರೋಪಣ ಪಟ್ಟಿಗೆ ಸರ್ಕಾರಿ ನೌಕರನಿಂದ ವಿವರಣೆ ಪಡೆಯಲು, ವಿಚಾರಣಾ ಅಧಿಕಾರಿಯನ್ನು ನೇಮಿಸಲು1 ತಿಂಗಳು, ವಿಚಾರಣೆ ನಡೆಸಿ ಮತ್ತು ವರದಿ ಮಂಡಿಸಲು 4 ತಿಂಗಳು, ವಿಚಾರಣಾ ವರದಿಯನ್ನು ನಡೆಸಲು ಮತ್ತು ಅದನ್ನು ಸ್ವೀಕರಿಸುವ ಬಗ್ಗೆ ನಿರ್ಣಯಿಸಲು 1 ತಿಂಗಳು, ಕಾರಣ ಕೇಳುವ 2 ನೇ ಸೂಚನಾ ಪತ್ರವನ್ನು ವಿಚಾರಣಾ ವರದಿಯ ಜೊತೆಗೆ ಆಪಾದಿತ ನೌಕರನಿಗೆ ನೀಡಲು 1 ತಿಂಗಳು ಮತ್ತು ಅಂತಿಮ ಆದೇಶ ಹೊರಡಿಸಲು ಗರಿಷ್ಠ ಕಾಲಮಿತಿ 1 ತಿಂಗಳು ನಿಗದಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.