ADVERTISEMENT

ಪರ್ಯಾಯ ರಾಜಕಾರಣದತ್ತ ಒಲವು: ‘ಮುಖ್ಯಮಂತ್ರಿ’ ಚಂದ್ರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 18:20 IST
Last Updated 22 ಜೂನ್ 2022, 18:20 IST
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು    

ನವದೆಹಲಿ: ‘ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಧೋರಣೆಯಿಂದ ಜನರು ಬೇಸತ್ತಿದ್ದು, ಪರ್ಯಾಯ ರಾಜಕಾರಣದತ್ತ ಒಲವು ವ್ಯಕ್ತವಾಗುತ್ತಿದೆ. ಪಕ್ಷದ ಸಂಘಟನೆಗಾಗಿ ತಿಂಗಳಿಗೆ 15 ದಿನ ರಾಜ್ಯ ಪ್ರವಾಸ ಮಾಡುತ್ತೇನೆ’ ಎಂದು ಎಎಪಿ ಮುಖಂಡ ‘ಮುಖ್ಯಮಂತ್ರಿ’ ಚಂದ್ರು
ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬುಧವಾರ ಭೇಟಿಯಾದ ಅವರು ಮೊಹಲ್ಲಾ ಕ್ಲಿನಿಕ್‌ ಹಾಗೂ ಸರ್ಕಾರಿ ಶಾಲೆಗಳನ್ನು ವೀಕ್ಷಿಸಿದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಟಿಕೆಟ್‌ಗೆ ಬೇಡಿಕೆ ಇಟ್ಟು ಪಕ್ಷಕ್ಕೆ ಬಂದಿಲ್ಲ. ಕಳೆದ ನಾಲ್ಕು ದಶಕಗಳಲ್ಲಿ ಮೂರು ಪಕ್ಷಗಳ ನಾಯಕರ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಧೋರಣೆಯಿಂದ ಬೇಸತ್ತು ಸ್ವಚ್ಛ ಆಡಳಿತಕ್ಕಾಗಿ ಎಎಪಿಗೆ ಸೇರಿದ್ದೇನೆ’ ಎಂದರು.

ADVERTISEMENT

ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿರವರು , ‘ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳನ್ನು ಪ್ರೋತ್ಸಾಹಿಸುವ ಮೂಲಕ ಪ್ರಾದೇಶಿಕತೆಗೆ ಒತ್ತು ನೀಡಿ ರಾಷ್ಟ್ರದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವುದೇ ಎಎಪಿಯ ಸ್ಪಷ್ಟ ನಿಲುವು’ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ನವೋದ್ಯಮಿ ಸಂಚಿತ್‌ ಗೌರವ್‌ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.