ADVERTISEMENT

ಇಕ್ಕಟ್ಟಿನ ನಡುವೆ ಮಕ್ಕಳ ಸಂಚಾರ

ಪಾದಚಾರಿ ಮಾರ್ಗದಲ್ಲಿ ವಾಹನಗಳು; ಆತಂಕದ ಮಧ್ಯೆ ಪೋಷಕರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 20:45 IST
Last Updated 10 ಡಿಸೆಂಬರ್ 2018, 20:45 IST
ಯಳಂದೂರು ಪಟ್ಟಣದ ದೇವಾಂಗ ಬೀದಿಯಲ್ಲಿ ವಾಹನ ದಟ್ಟಣೆಯ ನಡುವೆ ತಮ್ಮ ಮಕ್ಕಳನ್ನು ಕರೆದೊಯ್ಯುತ್ತಿರುವ ಪೋಷಕರು
ಯಳಂದೂರು ಪಟ್ಟಣದ ದೇವಾಂಗ ಬೀದಿಯಲ್ಲಿ ವಾಹನ ದಟ್ಟಣೆಯ ನಡುವೆ ತಮ್ಮ ಮಕ್ಕಳನ್ನು ಕರೆದೊಯ್ಯುತ್ತಿರುವ ಪೋಷಕರು   

ಯಳಂದೂರು: ಪಟ್ಟಣದ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ನಿಂತ ವಾಹನಗಳ ನಡುವೆ ಸಾರ್ವಜನಿಕರು ಮತ್ತು ಸವಾರರು ಸಂಚರಿಸಲು ಪ್ರಯಾಸ ಪಡುವಂತೆ ಆಗಿದೆ. ಮುಂಜಾನೆ ಮತ್ತು ಸಂಜೆ ವಿದ್ಯಾರ್ಥಿಗಳು ಶಾಲೆ–ಕಾಲೇಜು ಮುಗಿಸಿ ಬರುವಾಗ ದಿನನಿತ್ಯ ಕಿರಿಕಿರಿ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದ ಬಸ್ ನಿಲ್ದಾಣ, ಕುಂಬಾರಗುಂಡಿ ರಸ್ತೆ, ಎಸ್‌ಬಿಐ ವೃತ್ತ, ಬಳೇಪೇಟೆ ಹಾಗೂ ಸಂತೆಮರಹಳ್ಳಿ ರಸ್ತೆಯ ಬಳಿ ವಾಹನ ದಟ್ಟಣೆ ಅಧಿಕವಾಗಿದೆ. ಜೊತೆಗೆ, ಪಾದಚಾರಿ ಮಾರ್ಗದಲ್ಲಿ ನಿಂತ ದ್ವಿಚಕ್ರ ವಾಹನಗಳು ಪಾದಚಾರಿಗಳ ಸಂಚಾರಕ್ಕೆ ಅಡ್ಡಗೋಡೆಗಳಾಗಿ ಪರಿಣಮಿಸಿವೆ.

ದೇವಾಂಗ ಬೀದಿಯಲ್ಲಿ ಸಾಗುವುದೇ ಕಷ್ಟ: ಪಟ್ಟಣದ ದೇವಾಂಗ ಬೀದಿಯಲ್ಲಿ ಸರ್ಕಾರಿ ಮತ್ತು ಲಯನ್ಸ್ ಶಾಲೆಗಳಿವೆ. ಇಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಾರೆ. ಮಕ್ಕಳನ್ನು ಶಾಲೆಗೆ ಬಿಡಲು ಪೋಷಕರು ಇಲ್ಲಿಂದಲೇ ಸಂಚರಿಸಬೇಕು. ಕಿರಿದಾದ ರಸ್ತೆಯ ಎರಡೂ ಬದಿಗಳಲ್ಲಿ ಖಾಸಗಿ ವ್ಯಕ್ತಿಗಳು ಕಾರು ಮತ್ತು ಬೈಕುಗಳನ್ನು ನಿಲ್ಲಿಸುವ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಸ್ಥಳೀಯರ ರಸ್ತೆ ಅತಿಕ್ರಮಣದಿಂದ ಪಾದಚಾರಿಗಳು ಮತ್ತು ವಿದ್ಯಾರ್ಥಿಗಳು ಓಡಾಡಲು ತೊಂದರೆ ಪಡುವಂತೆ ಆಗಿದೆ ಎನ್ನುತ್ತಾರೆ ಅಂಬಳೆ ಮಣಿಕಂಠ.

ADVERTISEMENT

ಇತರೆಡೆ ರಸ್ತೆ ಅತಿಕ್ರಮಣ: ಪಟ್ಟಣದ ಬಹುತೇಕ ಬೀದಿಗಳಲ್ಲಿಯೂ ಈ ಸಮಸ್ಯೆ ಇದೆ. ಶಾಲಾ ಸಮಯದಲ್ಲಿ ಮಕ್ಕಳು ವಾಹನ ದಟ್ಟಣೆಯಿಂದ ಕೆಳಕ್ಕೆ ಬಿದ್ದು ಗಾಯಗೊಂಡಿರುವ ಉದಾಹರಣೆಗಳೂ ಇವೆ. ಶಾಲಾ ವಾಹನಗಳು ನಿಯಮ ಪಾಲಿಸುತ್ತಿಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿ ಸಂಚಾರಕ್ಕೆ ಧಕ್ಕೆ ತರುತ್ತಾರೆ. ಶಾಲೆಗೆ ಆಹಾರ ಪೂರೈಸುವ ವಾಹನ ದಟ್ಟಣೆಯಲ್ಲಿ ಸಿಲುಕಿ, ಚಲಿಸದೆ ಊಟದ ಬಾಕ್ಸ್‌ಗಳನ್ನು ಶಾಲಾ ಆವರಣಕ್ಕೆ ಹೊತ್ತೊಯ್ಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೂರುತ್ತಾರೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಮು, ಪೋಷಕರಾದ ಮಹಾದೇವಸ್ವಾಮಿ ಹಾಗೂ ಶಿವಣ್ಣ.

ಪಟ್ಟಣದ ಬಹುತೇಕ ಪುಟ್‌ಪಾತ್‌ಗಳನ್ನು ಎಲ್ಲಾ ಕಡೆ ಆಕ್ರಮಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.