ADVERTISEMENT

ಪಕ್ಷಿ ಮೇಲೆ ಕುಳಿತು ಅಂಡಮಾನ್ ಜೈಲಿನಿಂದ ತಾಯ್ನಾಡಿಗೆ ಬರುತ್ತಿದ್ದ ಸಾವರ್ಕರ್!

8ನೇ ತರಗತಿ ಪಠ್ಯದಲ್ಲಿ ವಿ.ಡಿ. ಸಾವರ್ಕರ್ ಕುರಿತ ಪ್ರವಾಸ ಕಥನ: ವ್ಯಾಪಕ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 1:42 IST
Last Updated 28 ಆಗಸ್ಟ್ 2022, 1:42 IST
ವಿ.ಡಿ. ಸಾವರ್ಕರ್
ವಿ.ಡಿ. ಸಾವರ್ಕರ್   

ಬೆಂಗಳೂರು: ವಿ.ಡಿ. ಸಾವರ್ಕರ್ ಕುರಿತು 8ನೇ ತರಗತಿ ಕನ್ನಡ (2ನೇ ಭಾಷೆ) ಪಠ್ಯದಲ್ಲಿ ಅಳವಡಿಸಿರುವ ‘ಕಾಲವನ್ನು ಗೆದ್ದವರು’ ಪ್ರವಾಸ ಕಥನದ ಒಂದು ಪ್ಯಾರಾ ವ್ಯಾಪಕ ಟೀಕೆಗೆ ಕಾರಣವಾಗಿದೆ.

ವಿಜಯಮಾಲಾ ರಂಗನಾಥ್‌ ಅವರ ‘ಬ್ಲಡ್‌ ಗ್ರೂಪ್‌’ ಗದ್ಯದ ಬದಲಿಗೆ ಲೇಖಕ ಕೆ.ಟಿ.ಗಟ್ಟಿ ಅವರ ಪ್ರವಾಸ ಕಥನವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯಕ್ಕೆ ಅಳವಡಿಸಿತ್ತು. ಈ ಪ್ರವಾಸ ಕಥನದ ಒಂದು ಪ್ಯಾರಾದಲ್ಲಿ ಸಾವರ್ಕರ್‌ ಕುರಿತು ಈ ರೀತಿಯ ವಾಕ್ಯಗಳಿವೆ.

‘ಕೋಣೆಯೊಳಗಿನ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ, ಕಿಂಡಿ ಕೂಡ ಇಲ್ಲದ ಆ ಕತ್ತಲ ಕೋಣೆಯಲ್ಲಿ ಸಾವರ್ಕರ್‌ ಅವರನ್ನು ಇಡಲಾಗಿತ್ತು. ಆದರೂ, ಎಲ್ಲಿಂದಲೊ ಬುಲ್‌ಬುಲ್‌ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್‌ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು’ ಎಂದು ಕೆ.ಟಿ.ಗಟ್ಟಿ ವರ್ಣಿಸಿದ್ದಾರೆ. ಲೇಖಕರು ಸಾವರ್ಕರ್ ಇದ್ದ ಅಂಡಮಾನ್ ಸೆಲ್ಯುಲಾರ್ ಕಾರಾಗೃಹಕ್ಕೆ ಭೇಟಿ ನೀಡಿದ ಸಮಯದ ತಮ್ಮ ಅನುಭವಗಳನ್ನು ಕಥನ ರೂಪದಲ್ಲಿ ಬರೆದಿದ್ದಾರೆ.

ADVERTISEMENT

ಈ ವೈಭವೀಕರಣದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿಹರಿದಾಡಿದ ಬಳಿಕ ಹಲವರು ಕರ್ನಾ ಟಕ ಪಠ್ಯಪುಸ್ತಕ ಸಂಘದ ಗಮನ ಸೆಳೆ ದಿದ್ದಾರೆ. ಈ ಕುರಿತು ಆ.29ರಂದು ಪರಿಶೀಲನೆ ನಡೆಸುವುದಾಗಿ ಸಂಘದ ಮೂಲಗಳು ತಿಳಿಸಿವೆ.

ಲೇಖಕರಿಗೆ ದುಂಬಾಲು ಬಿದ್ದ ಸರ್ಕಾರ: ಪಠ್ಯಪುಸ್ತಕ ಪುನರ್‌ ಪರಿಶೀಲನೆಗೆ ನೇಮಕಗೊಂಡ ರೋಹಿತ್ ಚಕ್ರತೀರ್ಥ ಸಮಿತಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹಲವು ತಿದ್ದುಪಡಿ ಮಾಡಿದೆ ಎಂದು ದೂರಿ ಹಲವು ಲೇಖಕರು ತಮ್ಮ ಪದ್ಯ, ಗದ್ಯಗಳನ್ನು ಮುಂದುವರಿಸಲು ಅನುಮತಿ ನಿರಾಕರಿಸಿದ್ದರು.

ಆದರೂ, ಹಲವರ ಬರಹಗಳು ವಿವಿಧ ತರಗತಿಗಳ 2022–23ನೇ ಸಾಲಿನ ಪಠ್ಯದಲ್ಲಿ ಮುಂದುವರಿಸ ಲಾಗಿದೆ. ಅಂತಹ ಲೇಖರಿಗೆ ಮತ್ತೆ ಅನುಮತಿ ಕೋರಿ ಸಚಿವ ಬಿ.ಸಿ.ನಾಗೇಶ್‌ ಮೇರೆಗೆ ಕರ್ನಾಟಕ ಪಠ್ಯಪುಸ್ತಕ ಸಂಘ ಪತ್ರ ಬರೆದಿದೆ.

‘2022–23ನೇ ಸಾಲಿಗೆ ಅಳವಡಿಸಿಕೊಂಡಿರುವ ನಾನು ಬರೆದ ‘ಅಮ್ಮನಾಗುವುದೆಂದರೆ’ ಪದ್ಯಕ್ಕೆ ಅನುಮತಿ ಕೋರಿ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದಿದ್ದಾರೆ. ಯಾರ ಕಾರಣಕ್ಕೂ ನನ್ನ ಸಮ್ಮತಿ ಇಲ್ಲ ಎಂದು ಖಚಿತವಾಗಿ ಪ್ರತಿಕ್ರಿಯಿಸಿರುವೆ’ ಎಂದು ಲೇಖಕಿ ರೂಪ ಹಾಸನ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.