ADVERTISEMENT

ಪೊಲೀಸ್ ನೇಮಕ: ವಯೋಮಿತಿ ಸಡಿಲಿಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 7:04 IST
Last Updated 1 ನವೆಂಬರ್ 2022, 7:04 IST
   

ತುಮಕೂರು: ಪೊಲೀಸರ ನೇಮಕಾತಿಯಲ್ಲಿ ಎರಡು ವರ್ಷ ವಯೋಮಿತಿ ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಹೇಳಿದರು.

ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೊಲೀಸರ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಮಾಡುವಂತೆ ಸಾಕಷ್ಟು ಒತ್ತಡಗಳು ಬಂದಿವೆ. ಪೊಲೀಸ್ ಇಲಾಖೆಯಲ್ಲಿ ಯುವ ಶಕ್ತಿ ಇರಬೇಕು ಎಂಬುದು ನನ್ನ ಆಶಯ. ಆದರೆ ಒತ್ತಡಗಳು ಹೆಚ್ಚಾಗುತ್ತಿವೆ’ ಎಂದರು.

ಒತ್ತಡಗಳು ಬಂದ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಒಂದು ತಿಂಗಳು ಕಾಲ ಮುಂದೂಡಲಾಗಿದೆ. ಎರಡು ವರ್ಷ ಸಡಿಲಿಕೆ ಮಾಡುವ ಆಲೋಚನೆ ಇದೆ. ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ಸಚಿವರ ಕಾಲಿಗೆ: ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ನೂರಾರು ಯುವಕರು ಸಚಿವ ಆರಗ ಜ್ಞಾನೇಂದ್ರ ಕಾಲಿಗೆ ಬಿದ್ದು, ಕಣ್ಣೀರಿಟ್ಟು ವಯೋಮಿತಿ ಸಡಿಲಿಸುವಂತೆ ಕೇಳಿಕೊಂಡರು.

ಕೋವಿಡ್ ಹಾಗೂ ಇತರ ಕಾರಣಗಳಿಂದಾಗಿ ಪೊಲೀಸರ ನೇಮಕಾತಿ ನಡೆದಿಲ್ಲ. ಈಗ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಿದ್ದು, ವಯೋಮಿತಿ ಸಡಿಲಿಸದಿದ್ದರೆ ಸಾಕಷ್ಟು ಮಂದಿಗೆ ಉದ್ಯೋಗ ಸಿಗುವುದಿಲ್ಲ. ಒಂದು ಬಾರಿಯಾದರೂ ಅವಕಾಶ ಮಾಡಿಕೊಡಬೇಕು ಎಂದು ಯುವಕ, ಯುವತಿಯರು ಪರಿಪರಿಯಾಗಿ ಬೇಡಿಕೊಂಡರು.

ಕನ್ನಡ ರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಸಚಿವರ ಬಳಿಗೆ ಹೋಗಲು ಮನವಿ ಹೊತ್ತು ಬಂದಿದ್ದವರನ್ನು ಬಿಡದೆ ಪೊಲೀಸರು ತಡೆದರು. ಮುನ್ನುಗ್ಗಲು ಯತ್ನಿಸಿದಾಗ ಲಾಠಿ ರುಚಿ ತೋರಿಸಿದರು. ಕೊನೆಗೂ ಹರಸಾಹಸ ಮಾಡಿ ಸಚಿವರನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.