
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ಗೇಟ್ಗಳನ್ನು ಅಳವಡಿಸಬೇಕಿರುವ ಕಾರಣ ಹಿಂಗಾರು ಹಂಗಾಮಿಗೆ ಜಲಾಶಯ ವ್ಯಾಪ್ತಿಯ ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ರೈತರಿಗೆ ನೀರು ಹರಿಸದಿರಲು 125ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ರಸ್ಟ್ಗೇಟ್ಗಳ ಅಳವಡಿಕೆಗಾಗಿ ಕಡಿಮೆ ಸಮಯ ನಿಗದಿ ಮಾಡಿ ಎರಡನೇ ಬೆಳೆಗೆ ನೀರು ಕೊಡಲೇಬೇಕು ಎಂದು ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದ್ದರೂ ’ಎರಡನೇ ಬೆಳೆಗೆ ನೀರು ಹರಿಸಲು ಸಾಧ್ಯವಿಲ್ಲ’ ಎಂದು ಐಸಿಸಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೊದಲು ತಿಳಿಸಿದಂತೆಯೇ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿ ಬೆಳೆದು ನಿಂತಿರುವ ಬೆಳೆಗಳಿಗೆ ಮಾತ್ರ ನೀರು ಒದಗಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಜಲಾಶಯದ ಮಟ್ಟ 1613 ಅಡಿ ತಲುಪಿದ ನಂತರ ಕ್ರಸ್ಟ್ಗೇಟ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಪ್ರಸ್ತುತ ಇರುವ 76 ಟಿಎಂಸಿ ಅಡಿ ನೀರಿನಲ್ಲಿಯೇ ಬೇಸಿಗೆ ಸಮಯದಲ್ಲಿ ಕುಡಿಯಲು, ಕೆರೆಕಟ್ಟಿ ತುಂಬಿಸಲು ಬಳಕೆ ಮಾಡಲಾಗುತ್ತದೆ.
ಪ್ರಸ್ತುತ ಬೆಳೆಗೆ ನೀರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ಡಿ. 1ರಿಂದ 2026ರ ಜನವರಿ 10ರ ತನಕ 3000 ಕ್ಯುಸೆಕ್ಸ್, ಎಡದಂಡೆ ವಿಜಯನಗರ ಕಾಲುವೆಗೆ ಜ. 1ರಿಂದ ಮೇ 10ರ ತನಕ 150 ಕ್ಯುಸಕ್ಸ್ನಂತೆ 1ರಿಂದ 11ಎ ಕಾಲುವೆ ತನಕ, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ ಜ. 10ರ ತನಕ 1300 ಕ್ಯುಸಕ್ಸ್ನಂತೆ, ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. 1ರಿಂದ ಜ. 10ರ ತನಕ 750 ಕ್ಯುಸಕ್ಸ್ನಂತೆ, ರಾಯ ಬಸವಣ್ಣ ಕಾಲುವೆಗೆ ಜ.1ರಿಂದ ಮೇ 31ರ ತನಕ ಸರಾಸರಿ 250 ಕ್ಯುಸೆಕ್ಸ್ ಅಥವಾ ಕಾಲುವೆಯಡಿ ನೀರು ಲಭ್ಯತೆ ಇರುವ ತನಕ ಇದರಲ್ಲಿ ಯಾವುದು ಮೊದಲು ಅನ್ವಯವಾಗುತ್ತದೆಯೊ ಅದರಂತೆ ನೀರು ಹರಿಸಲಾಗುತ್ತದೆ. ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ 25 ಕ್ಯುಸೆಕ್ಸ್ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳತನಕ ಇದರಲ್ಲಿ ಯಾವುದು ಮೊದಲೇ ಅದಕ್ಕೆ ಅನುಗುಣವಾಗಿ ನೀರು ಮತ್ತು 150 ಕ್ಯುಸೆಕ್ಸ್ನಂತೆ ನದಿ ಪೂರಕ ಕಾರ್ಖಾನೆಗಳಿಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವ ಎನ್.ಎಸ್. ಭೋಸರಾಜು, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ, ಹಂಪನಗೌಡ ಬಾದರ್ಲಿ, ನಾಗೇಂದ್ರ, ಗಣೇಶ್, ಬಸನಗೌಡ ದದ್ದಲ್, ಜನಾರ್ದನ ರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ, ವಸಂತಕುಮಾರ್, ಬಸವನಗೌಡ ಬಾದರ್ಲಿ, ಅಚ್ಚುಕಟ್ಟು ಪ್ರದೇಶದ ನಾಲ್ಕೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.