ADVERTISEMENT

ಸಿಂಹಗೆ ಖಾದರ್ ಪ್ರಶ್ನೆ: ಕೊಡಗು ಜಿಲ್ಲೆಗೆ ಕೇಂದ್ರ ವಿಶೇಷ ಅನುದಾನ ಕೊಟ್ಟಿದೆಯೇ?

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 9:27 IST
Last Updated 9 ಡಿಸೆಂಬರ್ 2018, 9:27 IST
   

ಮಂಗಳೂರು: 'ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ಜಿಲ್ಲೆ ಎಂದು ಘೋಷಿಸಲ್ಪಟ್ಟಿರುವ ಕೊಡಗು ಜಿಲ್ಲೆಗೆ ಕೇಂದ್ರ ಸರ್ಕಾರ ಈವರೆಗೆ ನಯಾಪೈಸೆಯಾದರೂ ವಿಶೇಷ ಅನುದಾನ ಕೊಟ್ಟಿದೆಯೇ' ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡುವ ಯೋಜನೆಗೆ ಶುಕ್ರವಾರ ಭೂಮಿ ಪೂಜೆ ನಡೆಯಿತು. ಅಲ್ಲಿ ಅನುದಾನದ ಬಗ್ಗೆ ಮಾಹಿತಿ ಇಲ್ಲದೆ ಪ್ರತಾಪ್ ಸಿಂಹ ಮಾತನಾಡಿದ್ದಾರೆ' ಎಂದರು.

ಮನೆಗಳಿಗೆ ಕೇಂದ್ರದ ಅನುದಾನ ಬಳಕೆ ಮಾಡಲಾಗುತ್ತಿದೆ ಎಂಬ ಅರ್ಥದಲ್ಲಿ 'ಹುಟ್ಟುವ ಮಕ್ಕಳ ಅಪ್ಪ, ಅಮ್ಮ ಯಾರು ಎಂಬುದು ಗೊತ್ತಾಗಬೇಕು' ಎಂದು ಹೇಳಿದ್ದಾರೆ. ‘ಈ ಮಾತು ಹೇಳುವ ಮುನ್ನ ಸರಿಯಾದ ಮಾಹಿತಿ ಅವರ ಬಳಿ ಇರಬೇಕಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಕರ್ನಾಟಕಕ್ಕೆ ₹ 540 ಕೋಟಿ ಮಂಜೂರು ಮಾಡಿದೆ. ಇದು ಕೊಡಗು ಜಿಲ್ಲೆಗೆ ಮಾತ್ರ ಕೊಟ್ಟ ಅನುದಾನವಲ್ಲ. ಎಂಟು ಜಿಲ್ಲೆಗಳಿಗೆ ಸೇರಿದ್ದು. ಮನೆ ನಿರ್ಮಾಣಕ್ಕೆ ಈ ಹಣ ಬಳಸುತ್ತಿಲ್ಲ. ರಾಜ್ಯ ಸರ್ಕಾರವೇ ಅನುದಾನ ಒದಗಿಸುತ್ತಿದೆ ಎಂದರು.

ಕೊಡಗು ಜಿಲ್ಲೆಯ ಜನರ ಬಗ್ಗೆ ಪ್ರತಾಪ್ ಸಿಂಹ ಅವರಿಗೆ ಕಾಳಜಿ ಇದ್ದರೆ ಸಂಸತ್ತಿನಲ್ಲಿ ಧ್ವನಿ ಎತ್ತಲಿ. ಕೇಂದ್ರದಿಂದ ವಿಶೇಷ ಅನುದಾನ ತರಲಿ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.