ADVERTISEMENT

ಆದಿತ್ಯ ರಾವ್‌ ಲಾಕರ್‌ನಲ್ಲಿ ಪೌಡರ್‌ ಪತ್ತೆ, ಸೈನೈಡ್‌ ಶಂಕೆ

ಮಲ್ಪೆಯಿಂದ ಹುಸಿ ಬಾಂಬ್‌ ಕರೆ ಮಾಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 19:35 IST
Last Updated 25 ಜನವರಿ 2020, 19:35 IST
.
.   

ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಆದಿತ್ಯರಾವ್‌ ಇಲ್ಲಿನ ಕರ್ಣಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಲಾಕರ್‌ನಲ್ಲಿ ಪುಡಿಯೊಂದರ ದಾಸ್ತಾನು ಪತ್ತೆಯಾಗಿದೆ. ಅದು ಸೈನೈಡ್‌ ಎಂದು ಆರೋಪಿಯೇ ಹೇಳಿಕೊಂಡಿದ್ದಾನೆ.

ಆರೋಪಿಯನ್ನು ಶನಿವಾರ ಉಡುಪಿಗೆ ಕರೆತಂದ ಮಂಗಳೂರಿನ ಪೊಲೀಸರು ಹಲವೆಡೆ ಸ್ಥಳ ಮಹಜರು ನಡೆಸಿದರು. ಕರ್ಣಾಟಕ ಬ್ಯಾಂಕ್‌ ಕುಂಜಿಬೆಟ್ಟು ಶಾಖೆಗೆ ಆದಿತ್ಯ ರಾವ್‌ನನ್ನು ಕರೆತರಲಾಗಿತ್ತು. ಆತನ ಲಾಕರ್‌ನ ಕೀಲಿ ಕಳೆದು ಹೋಗಿದ್ದರಿಂದ ಕೀ ರಿಪೇರಿ ಮಾಡುವ ವ್ಯಕ್ತಿಯನ್ನು ಕರೆಸಿ ಲಾಕರ್ ಬಾಗಿಲು ತೆರೆಯಲಾಯಿತು. ಬಳಿಕ ಅದರೊಳಗಿದ್ದ ದಾಖಲಾತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

‘ಲಾಕರ್‌ನಲ್ಲಿ 150 ಗ್ರಾಂ.ನಷ್ಟು ಪುಡಿ ಸಿಕ್ಕಿದೆ. ಅದು ಸೈನೈಡ್‌ ಎಂದು ಆರೋಪಿಯೇ ಹೇಳಿದ್ದಾನೆ. ಆದರೆ, ಈಗಲೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಪುಡಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪರೀಕ್ಷಾ ವರದಿ ಬಂದ ಬಳಿಕ ಖಚಿತ ಮಾಹಿತಿ ದೊರೆಯಲಿದೆ’ ಎಂದು ಪೊಲೀಸ್‌ನ ಮೂಲಗಳು ತಿಳಿಸಿವೆ.

ADVERTISEMENT

ಮಲ್ಪೆಯಿಂದ ಕರೆ

ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಬಳಿಕ ಮಲ್ಪೆಗೆ ಬಂದಿದ್ದ ಆರೋಪಿ ಇಲ್ಲಿನ ಗೂಡಂಗಡಿ ಒಂದರ ಬಳಿಯಿಂದ ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ ವ್ಯವಸ್ಥಾಪಕರಿಗೆ ಕರೆಮಾಡಿ ಇಂಡಿಗೊ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಸಿದ್ದ. ಈ ಬಗ್ಗೆಯೂ ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ಮಹಜರು ನಡೆಸಿದರು.

ಮಂಗಳೂರು ಉತ್ತರ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ನೇತೃತ್ವದ ತಂಡ ಆದಿತ್ಯ ರಾವ್‌ನನ್ನು ಮಲ್ಪೆಗೆ ಕರೆತಂದಿತ್ತು. ಬಾಂಬ್ ಬೆದರಿಕೆ ಕರೆ ಮಾಡಿದ ಬಳಿಕ ಆದಿತ್ಯ ಮೊಬೈಲ್‌ನಿಂದ ಸಿಮ್‌ ತೆಗೆದು ಬಿಸಾಡಿದ್ದ ಎನ್ನಲಾಗಿದ್ದು, ಪೊಲೀಸರು ಗೂಡಂಗಡಿಯ ಸುತ್ತಲೂ ಶೋಧ ನಡೆಸಿದರು. ಆದರೆ, ಯಾವುದೇ ವಸ್ತುಗಳು ಪತ್ತೆಯಾಗಲಿಲ್ಲ.

ಬಳಿಕ ಆದಿತ್ಯ ಕೆಲಸ ಮಾಡುತ್ತಿದ್ದ ಕಾರ್ಕಳದ ಬಾರ್‌ಗೆ ಕರೆದೊಯ್ದು, ಅಲ್ಲಿಯೂ ಸ್ಥಳ ತನಿಖೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.