ADVERTISEMENT

ಉಡುಪಿ ವಿಡಿಯೊ ಚಿತ್ರೀಕರಣ ಪ್ರಕರಣ: ಎಸ್‌ಐಟಿ ರಚನೆ ಬೇಡಿಕೆ ತಳ್ಳಿಹಾಕಿದ ಸಿಎಂ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 7:04 IST
Last Updated 1 ಆಗಸ್ಟ್ 2023, 7:04 IST
   

ಮಂಗಳೂರು: ಉಡುಪಿಯ ಅರೆವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ನಡೆಸಲಾಗಿದೆ ಎನ್ನಲಾದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂಬ ಬಿಜೆಪಿ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದರು‌.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಹಾನಿ ಪರಿಶೀಲನೆಗಾಗಿ ಇಲ್ಲಿಗೆ ಆಗಮಿಸಿರುವ ಮುಖ್ಯಮಂತ್ರಿ ಬಜಪೆ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದರು.

ಉಡುಪಿ ಘಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಕೇಂದ್ರದ ಮಹಿಳಾ ಆಯೋಗದವರು ಬಂದು ಪರಿಶೀಲಿಸಿದ್ದಾರೆ. ಕಾಲೇಜಿನ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿರಲಿಲ್ಲ ಎಂದು ಅವರೇ ಹೇಳಿಕೆ ನೀಡಿದ್ದಾರೆ. ಈ ಪ್ರಕರಣವನ್ನು ಡಿವೈಎಸ್ಪಿ ಹಂತದ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವುದಕ್ಕೆ‌ ಇದು ಸೂಕ್ತ ಸಂದರ್ಭ ಅಲ್ಲ' ಎಂದರು.

ADVERTISEMENT

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಕಾಲೇಜು ವಿದ್ಯಾರ್ಥಿನಿಯರು ತಮಾಷೆಗೆ ಈ ರೀತಿ ಮಾಡಿರಬಹುದು ಎಂದು ಗೃಹ ಸಚಿವರು ಹೇಳಿಕೆ ನೀಡಿರಬಹುದು. ಆದರೂ ಪ್ರಕರಣದ ಬಗ್ಗೆ ಡಿವೈಎಸ್ಪಿ ಹಂತದ ತನಿಖೆ ನಡೆಯುತ್ತಿದೆ' ಎಂದರು‌.

ಮುಖ್ಯಮಂತ್ರಿ ಯವರ ಕುಟುಂಬದವರನ್ನು ಉಲ್ಲೇಖಿಸಿ ಉಡುಪಿ ಪ್ರಕರಣ ಕುರಿತು ಟ್ವೀಟ್ ಮಾಡಿದ ಮಹಿಳೆಯನ್ನು ಬಂಧಿಸಿದ್ದನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ,'ಟೀಕೆ ಮಾಡುವ ನೆಪದಲ್ಲಿ ಏನು ಬೇಕಾದರೂ ಹೇಳಬಹುದಾ? ಟೀಕೆ ಬೇರೆ, ಸುಳ್ಳು ಸುದ್ದಿ ಹಬ್ಬಿಸುವುದು ಮತ್ತು ವೈಯಕ್ತಿಕ ತೇಜೋವಧೆ ಬೇರೆ' ಎಂದರು.

ಸಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ತಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.