ನವದೆಹಲಿ: ಬೆಂಗಳೂರು–ಕಲಬುರಗಿ ನಡುವೆ ಹೊಸ ರೈಲು ಸೇವೆ ಆರಂಭಿಸಬೇಕು ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಆಗ್ರಹಿಸಿದರು.
ಲೋಕಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಈಗಿರುವ ರೈಲುಗಳಿಗೆ ಕಲಬುರಗಿಯಿಂದ ನಿತ್ಯ 2,100 ಹಾಗೂ ಬೆಂಗಳೂರಿನಿಂದ ನಿತ್ಯ 3,300 ಟಿಕೆಟ್ ಬುಕ್ಕಿಂಗ್ ಆಗುತ್ತಿದೆ. ಕಲಬುರಗಿಯಿಂದ ಬೆಂಗಳೂರಿಗೆ ನಿತ್ಯ 70 ಬಸ್ಗಳು ಸಂಚರಿಸುತ್ತವೆ. ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಕಲಬುರಗಿಯಿಂದ ರಾಜಧಾನಿಗೆ ಹೋಗುವವರ ಸಂಖ್ಯೆ ಪ್ರತಿನಿತ್ಯ 10 ಸಾವಿರ ಆಗುತ್ತದೆ’ ಎಂದರು.
ಕಲಬುರಗಿಯು ಕಲ್ಯಾಣ ಕರ್ನಾಟಕದ ಪ್ರಮುಖ ನಗರ. ಉದ್ಯೋಗ, ಸಭೆಗಳು ಮತ್ತು ವ್ಯಾಪಾರದಂತಹ ವಿವಿಧ ಕಾರಣಗಳಿಗಾಗಿ ಗಣನೀಯ ಸಂಖ್ಯೆಯ ಜನರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಬಸವ ಎಕ್ಸ್ಪ್ರೆಸ್, ಸೋಲಾಪುರ–ಹಾಸನ ಎಕ್ಸ್ಪ್ರೆಸ್ ರೈಲುಗಳ ಕೋಟಾಗಳನ್ನು ಗಣನೀಯವಾಗಿ ಕಡಿತ ಮಾಡಿದ್ದರಿಂದ ಸಮಸ್ಯೆ ಉಲ್ಭಣಿಸಿದೆ. ನೇರ ರೈಲು ಸೇವೆ ಇಲ್ಲದ ಕಾರಣ ಜನರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಪ್ರದೇಶದ ಒಟ್ಟಾರೆ ಬೆಳವಣಿಗೆಗೂ ಅಡ್ಡಿಯಾಗಿದೆ’ ಎಂದು ಗಮನ ಸೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.