ADVERTISEMENT

ಕಾಂಗ್ರೆಸ್‌ನವರದ್ದು ಭಾರತ್‌ ತೋಡೊ ಯಾತ್ರೆ: ಪ್ರಲ್ಹಾದ ಜೋಶಿ ಟೀಕೆ 

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 8:57 IST
Last Updated 19 ಸೆಪ್ಟೆಂಬರ್ 2022, 8:57 IST
ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಕೇಂದ್ರ ಖೇಲೋ ಇಂಡಿಯಾ ಯೋಜನೆಯಲ್ಲಿ ₹ 6 ಕೋಟಿಯಲ್ಲಿ 6 ಕ್ರೀಡಾಂಗಣಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಚಾಲನೆ ನೀಡಿದರು. ಬ್ರಾಹ್ಮಣ ಅಭಿವೃದ್ಧಿ  ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್, ಶಾಸಕ ಎಸ್.ಎ.ರಾಮದಾಸ್, ಮೇಯರ್ ಶಿವಕುಮಾರ್, ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಇದ್ದಾರೆ/ ಪ್ರಜಾವಾಣಿ ಚಿತ್ರ
ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಕೇಂದ್ರ ಖೇಲೋ ಇಂಡಿಯಾ ಯೋಜನೆಯಲ್ಲಿ ₹ 6 ಕೋಟಿಯಲ್ಲಿ 6 ಕ್ರೀಡಾಂಗಣಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಚಾಲನೆ ನೀಡಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್, ಶಾಸಕ ಎಸ್.ಎ.ರಾಮದಾಸ್, ಮೇಯರ್ ಶಿವಕುಮಾರ್, ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ‘ಕಾಂಗ್ರೆಸ್‌ನವರದ್ದು ಭಾರತ್‌ ಜೋಡೊ ಯಾತ್ರೆ ಅಲ್ಲ; ಭಾರತ್‌ ತೋಡೊ (ಒಡೆಯುವ) ಕಾರ್ಯಕ್ರಮ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಇಲ್ಲಿನ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನದ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ‘ಮೋದಿ ಯುಗ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತ್ ಜೋಡೊ ನಡೆಸುತ್ತಿರುವವರು, ಭಾರತ್ ತೋಡೊ ಮಾಡುವವರನ್ನು ಮೊದಲು ಭೇಟಿಯಾಗಿದ್ದಾರೆ. ಭಾರತ ಮಾತೆಯ ಬಗ್ಗೆ ಅತ್ಯಂತ ಅವಹೇಳಕನಾರಿಯಾಗಿ ಮಾತನಾಡಿದ್ದ ಪಾದ್ರಿಯನ್ನು ಭೇಟಿಯಾಗಿ, ಭಾರತಾಂಬೆಯನ್ನು ಪೂಜಿಸುವ ದೇಶದ ಜನರಿಗೆ ಅಪಮಾನ ಎಸಗಿದ್ಡಾರೆ. ಆ ಯಾತ್ರೆ ನಡೆಸುತ್ತಿರುವವರಿಗೆ ನಾಚಿಕೆ ಆಗಬೇಕಲ್ಲವೇ?’ ಎಂದು ಕೇಳಿದರು.

ADVERTISEMENT

‘ಆಡಳಿತ ನಡೆಸುವವರಿಗೆ ವಿರೋಧಿಸುವವರು ಇರಬೇಕು ನಿಜ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುವುದು, ಭಾರತ ಮಾತೆಯನ್ನು ಅವಹೇಳನ ಮಾಡುವವರನ್ನು ಗೌರವಿಸುವುದು ಎಷ್ಟು ಸರಿ?’ ಎಂದರು. ‘ಅಂತಹ ಆಷಾಢಭೂತಿತನದ ರಾಜಕಾರಣಿಗಳನ್ನು ದೂರವಿಡಬೇಕು’ ಎಂದರು.

‘ಬಿಜೆಪಿ ಸರ್ಕಾರ ಬಂದರೆ ದೇಶ ಚೂರಾಗುತ್ತದೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದರು. ಆದರೆ, ಜಾಗತಿಕವಾಗಿ ಭಾರತವು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲೆಲ್ಲೂ ಒಂದೇ ಒಂದು ಭಯೋತ್ಪಾದನೆಯ ಘಟನೆ ನಡೆದಿಲ್ಲ‌. ಎಲ್ಲೂ ಬಾಂಬ್ ಸ್ಫೋಟವಾಗಿಲ್ಲ. ಜನರು ಸುರಕ್ಷಿತವಾಗಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಜಾಗತಿಕ ಮಟ್ಟದಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳದೇ ಕಾಂಗ್ರೆಸ್‌ನವರು ಟೀಕೆಯಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು.

ಭ್ರಮೆ–ಭಯದಲ್ಲಿ ಕಾಂಗ್ರೆಸ್‌ನವರು

ಇದಕ್ಕೂ ಮುನ್ನ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೋಶಿ, ‘ಭಯ ಮತ್ತು ಭ್ರಮೆಯಲ್ಲಿ ಕಾಂಗ್ರೆಸ್‌ನವರು ಬದುಕುತ್ತಿದ್ದಾರೆ’ ಎಂದು ಟೀಕಿಸಿದರು.

‘ರಾಹುಲ್ ಗಾಂಧಿ ಜೈಲಿಗೆ ಹೋಗಲು ಹೆದರುವವರಲ್ಲ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾರು ತಪ್ಪು ಮಾಡಿರುತ್ತಾರೆಯೋ ಅವರಿಗೆ ಭಯ ಇರುತ್ತದೆ. ನಾನಾಗಲಿ, ಸಂಸದ ಪ್ರತಾಪ ಸಿಂಹ (ಪಕ್ಕದಲ್ಲಿದ್ದರು) ಅವರಾಗಲಿ ಭಯಪಡುತ್ತೇವೆಯೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನವರು ಭ್ರಮೆಯಲ್ಲಿರಲು ಮಾಧ್ಯಮದವರು ಬಿಡಿ. ಇಷ್ಟು ದಿನ ಜನರನ್ನು ಭ್ರಮೆಯಲ್ಲಿಟ್ಟಿದ್ದರು. ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಮುಂದಿನ ಚುನಾವಣೆಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಅವರು ಎಂದಿಗೂ ದೇಶಕ್ಕಾಗಿ ವಿಚಾರ ಮಾಡಿಲ್ಲ. ನಕಲಿ ಗಾಂಧಿ ಕುಟುಂಬದವರ ಬಗ್ಗೆಯಷ್ಟೆ ಯೋಚಿಸುತ್ತಾರೆ’ ಎಂದು ಟೀಕಿಸಿದರು.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲಾಗುತ್ತದೆಯೇ, ಇಲ್ಲವೇ ಎಂಬ ಪ್ರಶ್ನೆಗೆ ‘ಆ ಬಗ್ಗೆ ನಂತರ ಮಾತನಾಡುತ್ತೇನೆ’ ಎಂದಷ್ಟೇ ಹೇಳಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್, ಮೇಯರ್ ಶಿವಕುಮಾರ್, ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.