ADVERTISEMENT

ಅಸ್ಪೃಶ್ಯತೆ ತಾಂಡವ: ‘ಪ್ರಜಾವಾಣಿ’ ವರದಿ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 21:00 IST
Last Updated 18 ಮಾರ್ಚ್ 2020, 21:00 IST
   

ಬೆಂಗಳೂರು: ‘ರಾಜ್ಯದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದು, ಅದನ್ನು ಆಚರಣೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಆಗ್ರಹಿಸಿದರು.

ಪರಿಷತ್ತಿನಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದೇ 9ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ‘ ಇನ್ನೂ ಇದೆ ಅಸ್ಪೃಶ್ಯತೆ’ ಎಂಬ ವರದಿಯನ್ನು ಪ್ರದರ್ಶಿಸಿದರು.

‘ಯಾದಗಿರಿಯಲ್ಲಿ ನಡೆದ ಸಾಮೂಹಿಕ ವಿವಾಹದ ವೇಳೆ ಪರಿಶಿಷ್ಟ ಜಾತಿಯ ವಧು–ವರರ ವಿವಾಹವನ್ನು ಸಮುದಾಯ ಭವನದಲ್ಲಿ, ಮೇಲ್ಜಾತಿಯವರ ವಿವಾಹವನ್ನು ದೇವಸ್ಥಾನದಲ್ಲಿ ನಡೆಸಲಾಗಿದೆ. ಊಟದಲ್ಲೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಪತ್ರಿಕೆಯ ವರದಿ ಉಲ್ಲೇಖಿಸಿದೆ. ಹೀಗೆ ಜಾತಿ ತಾರತಮ್ಯ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು’ ಎಂದರು.

ADVERTISEMENT

‘ನಲ್ಲಿಯಲ್ಲಿ ನೀರು ಹಿಡಿಯಲು, ಬಾವಿ ನೀರು ಸೇದಲು ಬಿಡುತ್ತಿಲ್ಲ. ಹೋಟೆಲ್‌ನಲ್ಲಿ ಪ್ರತ್ಯೇಕ ಲೋಟದಲ್ಲಿ ಟೀ ಕೊಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಶ್ರೀಮಂತರು ನಡೆಸಿಕೊಡುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಬೇಡಿ. ಸರ್ಕಾರ ನಡೆಸುತ್ತಿರುವ ‘ಸಪ್ತಪದಿ’ಯಲ್ಲಿ ಪಾಲ್ಗೊಂಡರೆ ಜಾತಿ ತಾರತಮ್ಯ ಇರುವುದಿಲ್ಲ’ ಎಂದರು. ಆದರೆ, ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ.

ಜನಗಣತಿ ಮುಂದೂಡಿ: ಜಬ್ಬಾರ್

‘ಕೊರೊನಾ ವೈರಸ್‌ ವೇಗವಾಗಿ ಹರಡುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಏಪ್ರಿಲ್ 15ರಿಂದ ಆರಂಭವಾಗಬೇಕಿರುವ ಜನಗಣತಿ ಮುಂದೂಡಬೇಕು’ ಎಂದು ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್ ಸಲಹೆ ನೀಡಿದರು.

‘ಸಿಎಎ, ಎನ್‌ಆರ್‌ಸಿಗೆ ಜನ್ಮ ದಾಖಲೆಗಳನ್ನು ಕೇಳುತ್ತಿದ್ದಾರೆ. 1970ರಿಂದೀಚೆಗೆ ಹುಟ್ಟಿದವರ ದಾಖಲೆಗಳು ಇರಬಹುದು. ಈ ಸದನದಲ್ಲಿ ಇರುವ ಶೇ 70ರಷ್ಟು ಜನರಿಗೆ ಜನ್ಮದಾಖಲೆ ಇಲ್ಲ. ಎಲ್ಲಿಂದ ತರುವುದು’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.