
ನವದೆಹಲಿ: ‘ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆದ ಆರೋಪ ಎದುರಿಸುತ್ತಿರುವ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರ ಕೃತ್ಯವನ್ನು ನಾನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ. ಲಂಚ ಪಡೆದಿರುವುದು ಸಮಂಜಸ ಅಲ್ಲ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಮಾಣಿ ವಿರುದ್ಧ ಪಿತೂರಿ ಹಾಗೂ ಷಡ್ಯಂತ್ರ ನಡೆದಿರಬಹುದು. ಅವರು ಉತ್ತಮ ಕೆಲಸ ಮಾಡುತ್ತಿದ್ದರು. ಈ ಘಟನೆ ನೋವು ತಂದಿದೆ’ ಎಂದರು.
'ಕುರಿ ಕಾಯುತ್ತಿದ್ದವನು ಮುಖ್ಯಮಂತ್ರಿ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ’ ಎಂದು ಸಿದ್ದರಾಮಯ್ಯ ಮಾಡಿದ ‘ಎಕ್ಸ್’ ಪೋಸ್ಟ್ಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ದಾರಿ ತಪ್ಪಿದ ಮಗ. ಅವರು 17 ಬಜೆಟ್ ಮಂಡಿಸಿದ್ದಾರೆ. ಕಾಂಗ್ರೆಸ್ಗೆ ಸೇರಿದ ದಿನದಿಂದ ಒಂದಲ್ಲ ಒಂದು ಅಧಿಕಾರದ ಸುಖ ಅನುಭವಿಸಿದ್ದಾರೆ. ಅಧಿಕಾರ ಎಷ್ಟು ವರ್ಷ? ನೂರು ವರ್ಷ ಅಧಿಕಾರ ನಡೆಸಬೇಕು ಎಂದು ಬಯಸಿದ್ದಾರಾ. ಇಂತಹ ದುರ್ಬುದ್ಧಿ ಒಳ್ಳೆಯದಲ್ಲ’ ಎಂದರು.
ಇದಕ್ಕೂ ಮುನ್ನ, ‘ಭಾರತ್ ಗೌರವ್ ದರ್ಶನ್– ವಿಶೇಷ ರೈಲು ಸೇವೆ’ ಕುರಿತ ಪುಸ್ತಕವನ್ನು ಸಚಿವರು ಬಿಡುಗಡೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.