ಕುಶಾಲನಗರ: ಪ್ರೇಮಿಗಳ ದಿನವಾದ ಶುಕ್ರವಾರವೇ ಪ್ರೇಮಿಗಳಿಬ್ಬರು ಹಾರಂಗಿ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊತ್ತೇಗಾಲದ ನಾಗಣ್ಣ ಅವರ ಪುತ್ರ ಸಚಿನ್ (24) ಹಾಗೂ ಯಮಗುಂಬ ಗ್ರಾಮದ ಜಲೇಂದ್ರ ಅವರ ಪುತ್ರಿ ಸಿಂಧು (19) ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳು.
ಹಾರಂಗಿ ಜಲಾಶಯ ವೀಕ್ಷಣೆಗಾಗಿ ಹುಣಸೂರಿನಿಂದ ಬೆಳಿಗ್ಗೆ ಬಂದಿದ್ದ ಪ್ರೇಮಿಗಳು, ಮಧ್ಯಾಹ್ನದವರೆಗೆ ಉದ್ಯಾನದಲ್ಲಿ ಸಮಯ ಕಳೆದು ನಂತರ ಜಲಾಶಯದ ಎಡಭಾಗದ ಕಾಡಿನಿಂದ ತೆರಳಿ ಇಬ್ಬರು ಜಲಾಶಯಕ್ಕೆ ಜಿಗಿತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹುಣಸೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪರಿಚಯವಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸಿಂಧುಗೆ ಪಿರಿಯಾಪಟ್ಟಣ ಯುವಕನ ಜೊತೆ ವಿವಾಹ ನಿಶ್ಚಯವಾಗಿತ್ತು. ಭಾನುವಾರ ಮದುವೆ ನಿಗದಿಯಾಗಿತ್ತು. ಇದರಿಂದ ಮನನೊಂದು ಇಬ್ಬರೂ ಆತ್ಮಹತ್ಯೆಗೆ ನಿರ್ಧರಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.