ಬೆಂಗಳೂರು: ಚೆನ್ನೈ–ಬೆಂಗಳೂರು ನಡುವಣ ದಕ್ಷಿಣ ಭಾರತದ ಮೊದಲ ಸೆಮಿಸ್ಪೀಡ್ ರೈಲು ‘ವಂದೇ ಭಾರತ್ ಎಕ್ಸ್ಪ್ರೆಸ್‘ಗೆ ಶುಕ್ರವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹೊಸ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದರು. 7 ನೇ ಪ್ಲಾಟ್ಫಾರಂನಿಂದ ಬೆಳಗ್ಗೆ 10.10ಕ್ಕೆ ರೈಲು ಚೆನ್ನೈಗೆ ಹೊರಟಿತು.
ಈ ಹೊಸ ರೈಲು ಬುಧವಾರ ಹೊರೆತುಪಡಿಸಿ ವಾರದ ಆರು ದಿನ ಚೆನ್ನೈ ಹಾಗೂ ಮೈಸೂರು ನಡುವೆ ಕಾರ್ಯಾಚರಣೆ ಮಾಡಲಿದೆ. ಕಟಪಾಡಿ ಹಾಗೂ ಬೆಂಗಳೂರಿನಲ್ಲಿ ರೈಲು ನಿಲ್ಲಲಿದೆ ಎಂದು ನೈಋತ್ಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಿಕೆಟ್ ದರ ಎಷ್ಟು?
ಉಪಹಾರ ಸೇರಿ ಮೈಸೂರು ಹಾಗೂ ಬೆಂಗಳೂರುವೆರೆಗಿನ ಚೇರ್ ಕಾರ್ (CC) ಪ್ರಯಾಣಕ್ಕೆ ₹720 ನಿಗದಿ ಮಾಡಲಾಗಿದೆ. ಎಕ್ಸಿಕ್ಯೂಟಿವ್ ಚೇರ್ ಕಾರ್ (EC) ಪ್ರಯಾಣಕ್ಕೆ ₹1,215 ನಿಗದಿ ಮಾಡಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಚೇರ್ ಕಾರ್ನಲ್ಲಿ ₹515 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ ಪ್ರಯಾಣಕ್ಕೆ ₹985 ದರ ಇದೆ.
ಚೆನ್ನೈನಿಂದ ಮೈಸೂರಿಗೆ ಚೇರ್ ಕಾರ್ನಲ್ಲಿ ಹಾಗೂ ಎಕ್ಸಿಕ್ಯೂಟಿವ್ ಚೇರ್ನಲ್ಲಿ ಕ್ರಮವಾಗಿ ₹ 1,200 ಹಾಗೂ ₹ 2,295 ಇದೆ. ಮೈಸೂರಿನಿಂದ ಚೆನ್ನೈಗೆ ಸಿಸಿ ಹಾಗೂ ಇಸಿ ಕೋಚ್ಗಳಲ್ಲಿ ಕ್ರಮವಾಗಿ ₹1,365 ಹಾಗೂ ₹2,485 ಇದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಐಆರ್ಸಿಟಿಯ ವೆಬ್ಸೈಟ್ಲ್ಲಿ ಅಥವಾ ಆ್ಯಪ್ನಲ್ಲಿ ಸಾಮಾನ್ಯ ರೈಲ್ವೇ ಟಿಕೆಟ್ಗಳನ್ನು ಖರೀದಿ ಮಾಡಿದಂತೆ ಮಾಡಬಹುದು. ರೈಲ್ವೆ ಸೇವೆ ಒದಗಿಸುವ ಥರ್ಡ್ ಪಾರ್ಟಿ ಅಪ್ಲಿಕೇಶನ್ನಲ್ಲಿಯೂ ಟಿಕೆಟ್ ಬುಕ್ ಮಾಡಬಹುದು. ಈಗಾಗಲೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.
ಈ ರೈಲು ಮುಂಜಾನೆ 5.50ಕ್ಕೆ ಚೆನ್ನೈನಿಂದ ಹೊರಡಲಿದ್ದು, (ಗಾಡಿ ಸಂಖ್ಯೆ 20607) ಬೆಳಿಗ್ಗೆ 10.20ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪಲಿದೆ. ಚೆನ್ನೈನಿಂದ ಮೈಸೂರು ತಲುಪು 6.30 ಗಂಟೆ ಸಮಯ ತೆಗೆದುಕೊಳ್ಳಲಿದೆ.
ಮೈಸೂರಿನಿಂದ ( ಗಾಡಿ ಸಂಖ್ಯೆ 20608) ಮಧ್ಯಾಹ್ನ 1.05ಕ್ಕೆ ಹೊರಡಲಿದ್ದು, ಮದ್ಯಾಹ್ನ 2.55ಕ್ಕೆ ಬೆಂಗಳೂರಿಗೆ ಬರಲಿದೆ. ಸಂಜೆ 7.30ಗೆ ಚೆನ್ನೈಗೆ ತಲುಪಲಿದೆ. ಮೈಸೂರಿನಿಂದ ಚೆನ್ನೈಗೆ ತಲುಪಲು 6 ಗಂಟೆ 35 ನಿಮಿಷ ತೆಗೆದುಕೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.