
ಬೆಂಗಳೂರು: ನರೇಗಾ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಜ.22ರಿಂದ 31ರವರೆಗೆ ವಿಶೇಷ ಅಧಿವೇಶನ ಕರೆದಿದ್ದರೆ, ಅತ್ತ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರು, ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿದ ‘ವಿಬಿ–ಜಿ ರಾಮ್ ಜಿ’ ಕುರಿತು ಚರ್ಚಿಸಲು ಎಲ್ಲ ಗ್ರಾಮ ಪಂಚಾಯಿತಿಗಳು ಜ.26ರಂದು ವಿಶೇಷ ಗ್ರಾಮ ಸಭೆ ಆಯೋಜಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಆಯುಕ್ತರ ನಡೆಗೆ ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ನರೇಗಾ ರದ್ದು ಮಾಡಿ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹೊಸ ಕಾಯ್ದೆ ತಂದಿದೆ. ನಿಯಮಗಳನ್ನೇ ರೂಪಿಸಿಲ್ಲ. ನಿಯಮ ರೂಪಿಸದೆ ಕಾಯ್ದೆಯ ಅನುಷ್ಠಾನ ಸಾಧ್ಯವಾಗದು. ಕರ್ನಾಟಕ ಸರ್ಕಾರ ಹೊಸ ಕಾಯ್ದೆಯನ್ನು ವಿರೋಧಿಸಿ, ವಿಶೇಷ ಅಧಿವೇಶನ ಕರೆದಿದೆ. ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ. ಇಂತಹ ಸಮಯದಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತರು ಹೊಸ ಕಾಯ್ದೆ ಕುರಿತು ಚರ್ಚಿಸಲು ವಿಶೇಷ ಗ್ರಾಮಸಭೆ ಆಯೋಜಿಸಲು ಸೂಚಿಸಿರುವುದು ಸರ್ಕಾರದ ದ್ವಂದ್ವ ನೀತಿಯಂತೆ ಕಾಣುತ್ತಿದೆ’ ಎಂದು ಟೀಕಿಸಿದ್ದಾರೆ.
‘ಗ್ರಾಮಸಭೆಗಳಲ್ಲಿ ಕೇಂದ್ರ ಸರ್ಕಾರದ ‘ವಿಬಿ–ಜಿ ರಾಮ್ ಜಿ’ ಕಾಯ್ದೆ ಜಾರಿಯಿಂದಾಗುವ ಅನುಕೂಲ, ಗ್ರಾಮೀಣಾಭ್ಯುದಯ, ನರೇಗಾ ಲೋಪಗಳ ದೃಶ್ಯಾವಳಿಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಹೀಗೆ ಮಾಡುವುದಾದರೆ ವಿಶೇಷ ಅಧಿವೇಶನದ ಅಗತ್ಯವೇನು? ಹೋರಾಟ ಏಕೆ ಮಾಡಬೇಕು’ ಎಂದು ಸಂಘಟನೆಗಳು ಪ್ರಶ್ನಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.