
ವಿಧಾನಸೌಧ
ಬೆಂಗಳೂರು: ವಿಧಾನಸೌಧದಲ್ಲಿ ಸಚಿವರೊಬ್ಬರ ಕಚೇರಿ ಬಳಿ ಚಿನ್ನಾಭರಣ ಕಳ್ಳತನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದು, ಚಿನ್ನಾಭರಣ ಅಲ್ಲಿಗೆ ಹೇಗೆ ತರಲಾಯಿತು ಎಂಬುದನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದರು.
ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ‘ಡಿ’ ದರ್ಜೆ ನೌಕರರನ್ನು ಬಂಧಿಸಲಾಗಿದೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ಹೇಳಿದರು.
‘ವಿಧಾನಸೌಧದ ಯಾವ ಗೇಟ್ನಿಂದ ಚಿನ್ನಾಭರಣ ಒಳಗೆ ಹೋಯಿತು. ಸಚಿವರ ಕಚೇರಿಗೆ ಬ್ಯಾಗ್ ಹೋಗುತ್ತದೆ ಎಂದರೆ ಅದನ್ನು ಪತ್ತೆ ಹಚ್ಚಬೇಕಲ್ಲವೇ? ಆದ ಕಾರಣ ತನಿಖೆ ಆದೇಶಿಸಲಾಗಿದೆ. ಸದ್ಯವೇ ವರದಿ ಕೈ ಸೇರಲಿದೆ. ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪರಮೇಶ್ವರ ತಿಳಿಸಿದರು.
ವಿಧಾನಸೌಧದಲ್ಲಿ ಸಚಿವರ ಕಚೇರಿ ಬಳಿ 300 ಗ್ರಾಂ ಚಿನ್ನಾಭರಣ ಕಳ್ಳತನ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ನವೀನ್ ಎಂಬುವವರು ದೂರು ನೀಡಿದ್ದರು. ಆ ದೂರನ್ನು ಆಧರಿಸಿ ಆಡಳಿತ ಸುಧಾರಣಾ ಮತ್ತು ಸಿಬ್ಬಂದಿ ಇಲಾಖೆಯ ಡಿ ದರ್ಜೆ ನೌಕರ ಆಂತೋಣಿ ಎಂಬುವವರನ್ನು ಬಂಧಿಸಿ ಚಿನ್ನಾಭರಣ ಮತ್ತು ₹ 1ಲಕ್ಷ ನಗದು ವಶಕ್ಕೆ ತೆಗೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.