ಹೊಸಪೇಟೆ (ವಿಜಯನಗರ): ಕೋವಿಡ್ ನಂತರ ದಾಖಲೆ ಸಂಖ್ಯೆಯ ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದು, ಪ್ರವಾಸೋದ್ಯಮಕ್ಕೆ ‘ಬೂಸ್ಟರ್ ಡೋಸ್’ ಸಿಕ್ಕಂತಾಗಿದೆ.
2020ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಇತರೆ ಕ್ಷೇತ್ರಗಳಂತೆ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಆಗಾಗ ಲಾಕ್ಡೌನ್, ನಿರ್ಬಂಧ, ಸೀಮಿತ ಸಂಖ್ಯೆಯ ಜನರ ಓಡಾಟ, ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುವುದು ಇಳಿಯುವುದು ನಡೆದೇ ಇತ್ತು. ಜನ ಮುಕ್ತವಾಗಿ ಓಡಾಡಲು ಹಿಂಜರಿಯುತ್ತಿದ್ದರು. ಆದರೆ, ಬಹುತೇಕ ಜನ ಕೋವಿಡ್ ಲಸಿಕೆ ಪಡೆದ ನಂತರ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ. ಇದರಿಂದ ಜನರಲ್ಲಿ ಆತ್ಮವಿಶ್ವಾಸ ಬಂದಿದ್ದು, ಈಗ ಎಲ್ಲೆಡೆ ಮುಕ್ತವಾಗಿ ಓಡಾಡುತ್ತಿದ್ದಾರೆ. ವಿಜಯನಗರ ಜಿಲ್ಲೆಗೆ ಆ. 13ರಿಂದ 15ರ ಅವಧಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ಕೊಟ್ಟಿದ್ದು, ಅದನ್ನು ಪುಷ್ಟೀಕರಿಸುವಂತಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದಿಂದ ಆ. 5ರಿಂದ 15ರ ವರೆಗೆ ಹಂಪಿ ಸ್ಮಾರಕಗಳಿಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಅಲ್ಲದೇ ಪ್ರವಾಸಿಗರಿಗೆ ಉಚಿತ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ರಾತ್ರಿ 9ರ ವರೆಗೆ ಪ್ರವಾಸಿಗರು ಹಂಪಿಯಲ್ಲಿ ಓಡಾಡಿ ಸ್ಮಾರಕ ವೀಕ್ಷಿಸಿದರು.
ಈ ಸಲ ಉತ್ತಮ ಮಳೆಯಾಗಿರುವುದರಿಂದ ಸುತ್ತಮುತ್ತಲಿನ ಪರಿಸರ ಹಚ್ಚ ಹಸಿರಾಗಿದೆ. ತುಂಗಭದ್ರಾ ಜಲಾಶಯ ತುಂಬಿದ್ದು, ಸತತವಾಗಿ ನದಿಗೆ ನೀರು ಹರಿಸಲಾಗುತ್ತಿದೆ. ಕ್ರಸ್ಟ್ಗೇಟ್ಗಳಿಗೆ ದೀಪಾಲಂಕಾರ ಮಾಡಿ ನೀರು ಬಿಡಲಾಗುತ್ತಿದೆ. ರಾಜ್ಯದ ಇತರೆ ಕಡೆಗಳಲ್ಲಿ ಪ್ರವಾಹದಿಂದ ಅಪಾರ ಹಾನಿ ಉಂಟಾಗಿದೆ. ಭೂಕುಸಿತದಂತಹ ಪ್ರಕರಣಗಳು ಅಲ್ಲಿ ವರದಿಯಾಗಿದ್ದವು. ಆದರೆ, ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿ ಇರಲಿಲ್ಲ. ತುಂಗಭದ್ರಾ ಮೈದುಂಬಿಕೊಂಡು ಹರಿಯುತ್ತಿರುವುದರಿಂದ ಹಂಪಿ ಪ್ರವಾಸಿಗರಿಗೆ ಅದನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತ್ತು.
ಹೊಸಪೇಟೆಗೆ ಬಂದರೆ ಹಂಪಿ, ತುಂಗಭದ್ರಾ ಜಲಾಶಯದ ಜೊತೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ದರೋಜಿ ಕರಡಿಧಾಮ, ಗುಂಡಾ ಸಸ್ಯ ಉದ್ಯಾನ, ‘ಲೇಕ್ ವ್ಯೂವ್’, ಸ್ವಲ್ಪ ದೂರ ಕ್ರಮಿಸಿದರೆ ಸಂಡೂರಿನ ಬೆಟ್ಟಗುಡ್ಡಗಳು, ಅಂಕಸಮುದ್ರ ಪಕ್ಷಿಧಾಮ, ಕೊಟ್ಟೂರು, ಉಜ್ಜಯಿನಿ ದೇವಸ್ಥಾನ ಕಣ್ತುಂಬಿಕೊಳ್ಳಬಹುದು. ಇದನ್ನೆಲ್ಲ ಯೋಚಿಸಿಯೇ ಪ್ರವಾಸಿಗರು ಆ. 13ರಿಂದ 15ರ ವರೆಗೆ ರಜಾ ದಿನಗಳು ಇದ್ದದ್ದರಿಂದ ಮುಂಚೆಯೇ ಯೋಜಿಸಿ ಬಂದದ್ದರಿಂದ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಯ ಹೋಟೆಲ್, ರೆಸಾರ್ಟ್, ಅತಿಥಿ ಗೃಹಗಳೆಲ್ಲ ಭರ್ತಿಯಾಗಿದ್ದವು. ಅನೇಕ ಜನ ಕೊಠಡಿಗಳು ಸಿಗದೇ ವಾಹನಗಳಲ್ಲಿಯೇ ರಾತ್ರಿ ಕಳೆದು ಹಿಂತಿರುಗಿದ್ದಾರೆ. ಕೆಲವರು ಒಂದೇ ದಿನಕ್ಕೆ ಪ್ರವಾಸ ಮೊಟಕುಗೊಳಿಸಿದ್ದಾರೆ.
ಆ. 14 ಭಾನುವಾರ ಹಾಗೂ ಆ. 15ರಂದು ಹಂಪಿ, ತುಂಗಭದ್ರಾ ಜಲಾಶಯಕ್ಕೆ ಪ್ರವಾಸಿಗರು ಹೆಚ್ಚಾಗಿ ಬಂದದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸ್ಮಾರಕಗಳ ಸುತ್ತ ಜನರನ್ನು ನಿಯಂತ್ರಿಸುವುದೇ ಭದ್ರತಾ ಸಿಬ್ಬಂದಿಗೆ ದೊಡ್ಡ ಕೆಲಸವಾಗಿತ್ತು. ಕೆಲ ಪ್ರವಾಸಿಗರು ಇಡೀ ದಿನ ಕಳೆದರೂ ಒಂದೆರೆಡೆ ಸ್ಮಾರಕಗಳನ್ನು ನೋಡಲು ಸಾಧ್ಯವಾಗಿತ್ತು. ಹೆಚ್ಚಿನ ಜನ ಬಂದದ್ದರಿಂದ ಸ್ಥಳೀಯ ವ್ಯಾಪಾರಿಗಳು, ಗೈಡ್ಗಳಿಗೆ ಬಿಡುವಿಲ್ಲದ ಕೆಲಸ ಇತ್ತು. ಕೋವಿಡ್ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿ, ಹೆಚ್ಚಿನ ಪ್ರವಾಸಿಗರು ಬಂದದ್ದರಿಂದ ಪ್ರವಾಸೋದ್ಯಮ ನೆಚ್ಚಿಕೊಂಡು ಬದುಕುತ್ತಿರುವವರ ಮೊಗದಲ್ಲಿ ಮಂದಹಾಸ ಮರಳಿದೆ.
ಒಂದೇ ದಿನ ₹3 ಲಕ್ಷ ಟಿಕೆಟ್ ಶುಲ್ಕ ಸಂಗ್ರಹ
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ (ಹಂಪಿ ಜೂ) ಆ. 15ರಂದು ಒಂದೇ ದಿನ ಟಿಕೆಟ್ ಶುಲ್ಕದಿಂದ ₹3 ಲಕ್ಷ ಆದಾಯ ಬಂದಿದೆ.
ಸಫಾರಿ, ಜೂಗೆ ಪ್ರತ್ಯೇಕ ಶುಲ್ಕವಿದೆ. ಪಾರ್ಕಿಂಗ್, ಕ್ಯಾಮೆರಾಕ್ಕೆ ಪ್ರತ್ಯೇಕವಾಗಿ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚಿನ ಪ್ರವಾಸಿಗರು ಬಂದದ್ದರಿಂದ ಜೂ ಸಿಬ್ಬಂದಿ ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ.
‘ಜೂ ನಿರ್ಮಾಣವಾದ ನಂತರ ಹೆಚ್ಚಿನ ಪ್ರವಾಸಿಗರು ಆ.15ರಂದು ಭೇಟಿ ಕೊಟ್ಟಿದ್ದಾರೆ. ಪ್ರವಾಸಿಗರಿಗೆ ತಕ್ಕಂತೆ ವಾಹನಗಳು ಇರದ ಕಾರಣ ಅನೇಕ ಪ್ರವಾಸಿಗರಿಗೆ ಜೂ ವರೆಗೆ ಕಾಲ್ನಡಿಗೆಯಲ್ಲಿ ಹೋಗಲು ಅವಕಾಶ ಕಲ್ಪಿಸಲಾಗಿತ್ತು. ನಮ್ಮ ಸಿಬ್ಬಂದಿ ಸಾಕಷ್ಟು ಬೆವರು ಹರಿಸಿದರು’ ಎಂದು ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ಕಿರಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.