ಬೆಂಗಳೂರು: ವಿಕಾಸಸೌಧಕ್ಕೆ ಕಳಪೆ ಕಲ್ಲುಗಳ ಬಳಕೆ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ಗಳಾದ ಬಿ.ಕೆ ಪವಿತ್ರ ಹಾಗೂ ಎನ್.ಜೆ. ಗೌಡಯ್ಯ ಸೇರಿದಂತೆ ಆರು ಎಂಜಿನಿಯರ್ಗಳ ಮೇಲಿನ ಆರೋಪವು ಭಾಗಶಃ ಸಾಬೀ ತಾಗಿರುವುದರಿಂದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತಿರುವುದಾಗಿ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ಪವಿತ್ರ 2028ರ ಜುಲೈ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದು, ಐದು ವರ್ಷಗಳ ಅವಧಿಗೆ ವಾರ್ಷಿಕ ವೇತನ ಬಡ್ತಿ ನೀಡಬಾರದು. ಗೌಡಯ್ಯ 2022ರ ಫೆಬ್ರುವರಿಯಲ್ಲಿ ನಿವೃತ್ತಿ ಆಗಲಿದ್ದು, ಮೂರು ವರ್ಷ ವಾರ್ಷಿಕ ಬಡ್ತಿ ಕೊಡಬಾರದು, ಆನಂತರ ಎರಡು ವರ್ಷ ಪಿಂಚಣಿಯಲ್ಲಿ ಶೇ 25ರಷ್ಟು ಹಣಕ್ಕೆ ಕತ್ತರಿ ಹಾಕಬೇಕು ಎಂದು ತಿಳಿಸಲಾಗಿದೆ. ಈಗಾಗಲೇ ನಿವೃತ್ತರಾಗಿರುವ ಕೆ. ಶಿವಕುಮಾರ್, ಎಂ.ಎಸ್. ಸತೀಶ್, ಆರ್.ವಿ. ನರಸೇಗೌಡ ಮತ್ತು ಸಿ. ವಿರೂಪಾಕ್ಷಪ್ಪ ಅವರಿಗೆ ನೀಡುವ ಪಿಂಚಣಿಯಲ್ಲಿ ಶೇ 25ರಷ್ಟು ಹಣವನ್ನು ಐದು ವರ್ಷಗಳವರೆಗೆ ಕಡಿತಗೊಳಿಸುವಂತೆ ಹೇಳಲಾಗಿದೆ.
ಲೋಕಾಯುಕ್ತ 2008ರ ನವೆಂಬರ್ನಲ್ಲಿ ಲೋಕೋಪಯೋಗಿ ಇಲಾಖೆ ಅಂದಿನ 14 ಎಂಜಿನಿಯರ್ಗಳ ವಿರುದ್ಧ ಇಲಾಖೆ ವಿಚಾರಣೆಗೆ ಅನು ಮತಿ ನೀಡುವಂತೆ ಕೇಳಿತ್ತು. 2009ರ ಜನವರಿಯಲ್ಲಿ ರಾಜ್ಯ ಸರ್ಕಾರ ಅನು ಮತಿ ನೀಡಿತ್ತು. ಸಿ. ಜಯರಾಂ, ಟಿ.ಡಿ. ಮನಮೋಹನ್ ಹಾಗೂ ಪಿ. ಸಿದ್ದಪ್ಪ ಅವರು ಸೇವೆಯಿಂದ ನಿವೃತ್ತರಾಗಿ ನಾಲ್ಕು ವರ್ಷ ಪೂರ್ಣಗೊಂಡಿರುವುದರಿಂದ ಇಲಾಖೆ ವಿಚಾರಣೆ ಹಿಂದಕ್ಕೆ ಪಡೆದು ಸರ್ಕಾರ 2015ರಲ್ಲಿ ಆದೇಶ ಹೊರಡಿಸಿತ್ತು.
ಜಿ.ಎಸ್. ನರ ಸಿಂಹಮೂರ್ತಿ, ಜಿ. ಮುನಿನಾರಾಯಣಸ್ವಾಮಿ, ವಿಜಯರಾಘವನ್, ಬಿ.ವಿ. ರಮೇಶ್ ಮತ್ತು ಎಂ.ನಾಗರಾಜ್ ವಿರುದ್ಧದ ಆರೋಪವನ್ನು ಸಾಬೀತು ಪಡಿಸಲು ಶಿಸ್ತು ಪ್ರಾಧಿಕಾರ ವಿಫಲ ವಾಗಿದೆ ಎಂದು ಹೇಳಿ ಅವರ ವಿರುದ್ಧದ ವಿಚಾರಣೆಯನ್ನು ಲೋಕಾಯುಕ್ತ ಕೈಬಿಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.