ಚಿತ್ರದುರ್ಗ: ಅರಣ್ಯ ಸಚಿವ ಆರ್.ಶಂಕರ್ ವಾಸ್ತವ್ಯ ಹೂಡಿದ್ದರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಪ್ರವಾಸಿಗರು ಭಾನುವಾರ ಜೋಗಿಮಟ್ಟಿ ಗಿರಿಧಾಮದ ಬೀಗ ಮುರಿದು ಒಳ ನುಗ್ಗಿದರು.
ಪ್ರವಾಸಿಗರ ಆಕ್ರೋಶ ಕಟ್ಟೆಯೊಡೆದ ಪರಿಣಾಮ ಅರಣ್ಯ ಇಲಾಖೆ ಸಿಬ್ಬಂದಿ ಮೂಕಪ್ರೇಕ್ಷರಾಗಿದ್ದರು. ಸಚಿವರು ತಂಗಿದ್ದ ಪ್ರವಾಸಿ ಮಂದಿರ ಹೊರತುಪಡಿಸಿ ಉಳಿದೆಡೆ ಸಂಚರಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಯಿತು.
ಶನಿವಾರ ರಾತ್ರಿ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಶಂಕರ್, ಜೋಗಿಮಟ್ಟಿ ಗಿರಿಧಾಮದ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಹೀಗಾಗಿ, ಸಾರ್ವಜನಿಕ ಪ್ರವೇಶವನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿರ್ಬಂಧಿಸಿದ್ದರು. ಪ್ರಕೃತಿ ಸೌಂದರ್ಯ ಆಸ್ವಾಧಿಸಲು ವಾರಂತ್ಯದ ನಸುಕಿನಲ್ಲಿ ಬಂದಿದ್ದ ಪ್ರವಾಸಿಗರಿಗೆ ಇದರಿಂದ ನಿರಾಶೆ ಉಂಟಾಯಿತು.
ಗಿರಿಧಾಮದ ಪ್ರವೇಶ ದ್ವಾರದ ಬಳಿ ಸುಮಾರು 50ಕ್ಕೂ ಹೆಚ್ಚು ದ್ವಿಚಕ್ರ ವಾಹನ ಹಾಗೂ 25ಕ್ಕೂ ಅಧಿಕ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಈ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಆಕ್ರೋಶಗೊಂಡ ಪ್ರವಾಸಿಗರ ಗುಂಪು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿತು. ಸಚಿವರು ಮರಳಿದ ಬಳಿಕ ಪ್ರವೇಶ ಕಲ್ಪಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಬಹುತೇಕರನ್ನು ಕೆರಳಿಸಿತು. ಕುಪಿತಗೊಂಡ ಪ್ರವಾಸಿಗರು ಗೇಟಿನ ಬೀಗವನ್ನು ಕಲ್ಲಿನಿಂದ ಜಜ್ಜಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.