
ಕಲಬುರಗಿ: 'ವೋಟ್ ಚೋರಿ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು, ಮತದಾರರ ಪಟ್ಟಿಯಿಂದ ಮತದಾರರ ಹೆಸರು ಅಳಿಸಿಹಾಕಲು ಪ್ರತಿಯೊಂದಕ್ಕೆ ₹ 80 ಪಾವತಿಸಲಾಗಿದೆ ಎನ್ನುವ ಅಂಶ ಎಸ್ಐಟಿ ತನಿಖೆಯಿಂದ ತಿಳಿದುಬಂದಿದೆ. ಇದು ಮತಗಳವು ವಿಚಾರದಲ್ಲಿ ನಾವು ಇಷ್ಟು ದಿನ ಹೇಳುತ್ತಿದ್ದ ವಿಷಯ ಎಸ್ಐಟಿ ತನಿಖೆಯಿಂದ ದೃಢಪಟ್ಟಿದೆ' ಎಂದು
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
'ಎಲ್ಲಾ ತನಿಖೆಗಳು ಈಗ ಬಿಜೆಪಿ ನಾಯಕರು ಮತ್ತು ಅವರ ಸಹಚರರ ಅಕ್ರಮವನ್ನು ತೋರಿಸುತ್ತವೆ. ಬಿಜೆಪಿಯ ವೋಟ್ ಚೋರಿಯ ಪ್ರತಿಯೊಂದು ಕೊಳಕು ತಂತ್ರ ಮತ್ತು ಕಾರ್ಯವೈಖರಿಯನ್ನು ಒಂದೊಂದಾಗಿ ಬಹಿರಂಗಪಡಿಸುತ್ತಿವೆ. ಈ ವಿಷಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿ ಜೈಲಿಗೆ ಹಾಕಲಾಗುವುದು' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
2023ರ ವಿಧಾನಸಭೆ ಚುನಾವಣೆಗೆ ಮುನ್ನ, ಆಳಂದ ಮತ ಕ್ಷೇತ್ರದಲ್ಲಿ ಹಣ ನೀಡುವ ಮೂಲಕ ಸುಮಾರು 6,000ಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಯತ್ನಿಸಲಾಗಿತ್ತು.
ಕಲಬುರಗಿಯ ಪೂರ್ಣ ಪ್ರಮಾಣದ ದತ್ತಾಂಶ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿರ್ವಾಹಕರು ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಹಾಳುಗೆಡವುತ್ತಿದ್ದರು ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.