ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನ.22 ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನಲ್ಲಿ ಉಂಟಾಗಿದ್ದ ಮೇಲ್ಮೈ ಸುಳಿಗಾಳಿ ದುರ್ಬಲಗೊಂಡಿದ್ದು, ಅರಬ್ಬಿ ಸಮುದ್ರ
ದಲ್ಲಿದ್ದ ವಾಯುಭಾರ ಕುಸಿತದ ತೀವ್ರತೆ ತಗ್ಗಿರುವುದರಿಂದ ರಾಜ್ಯದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಗಳಿವೆ.
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಸೋಮವಾರ ಹೆಚ್ಚು ಮಳೆಯಾಗುವ ಸೂಚನೆಗಳಿದ್ದು, ‘ಯೆಲ್ಲೊ ಅಲರ್ಟ್’ ಮುಂದುವರಿಸಲಾಗಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದ್ದು, ಉತ್ತರ ಒಳನಾಡಿನಲ್ಲಿ ಮಳೆಯ ಸೂಚನೆಗಳಿಲ್ಲ. ನ.23 ರಿಂದ ರಾಜ್ಯದಾದ್ಯಂತ ಮಳೆ ಪ್ರಮಾಣ ತಗ್ಗಲಿದೆ ಎಂದು ಮಾಹಿತಿ ನೀಡಿದೆ.
ಮಳೆ–ಎಲ್ಲಿ, ಎಷ್ಟು?: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಬಳ್ಳಾರಿ ಜಿಲ್ಲೆಯ ಕುಡತಿನಿ ಪ್ರದೇಶದಲ್ಲಿಭಾನುವಾರ ಗರಿಷ್ಠ, ತಲಾ 9 ಸೆಂ.ಮೀ ಮಳೆಯಾಗಿದೆ.
ಸಿಂಧನೂರು 8, ಗಂಗಾವತಿ, ಬಾಗಲಕೋಟೆ 5, ಭಟ್ಕಳ, ಕಾರವಾರ, ಧರ್ಮಸ್ಥಳ, ಕಾರ್ಕಳ, ಹುಕ್ಕೇರಿ, ಬಂಗಾರಪೇಟೆ 3, ಉಡುಪಿ, ಮಂಗಳೂರು, ಹಾವೇರಿ, ಗದಗ, ಮುಳಬಾಗಿಲು 2, ಬೆಳ್ತಂಗಡಿ, ಚಿಕ್ಕೋಡಿ, ನಿಪ್ಪಾಣಿ, ಧಾರವಾಡ, ಬೆಳಗಾವಿ, ನರಗುಂದ, ರಾಯಚೂರು, ಚಿಕ್ಕಬಳ್ಳಾಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.ದಾವಣಗೆರೆಯಲ್ಲಿ 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.