ADVERTISEMENT

ಹಿಜಾಬ್‌ ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಶಾಸಕ ಯತ್ನಾಳ

ಮದರಸಾ, ಉರ್ದು ಶಾಲೆಗಳನ್ನು ಮುಚ್ಚಬೇಕು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 7:57 IST
Last Updated 5 ಫೆಬ್ರುವರಿ 2022, 7:57 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಮೈಸೂರು: ‘ರಾಜ್ಯದಲ್ಲಿರುವ ಎಲ್ಲ ಮದರಸಾ ಮತ್ತು ಉರ್ದು ಶಾಲೆಗಳನ್ನು ಬಂದ್‌ ಮಾಡಬೇಕು. ಕಲಿಯುವುದಾದರೆ ಕನ್ನಡ ಕಲಿಯಲಿ, ಭಾರತದ ಸಂಸ್ಕೃತಿಯನ್ನು ಒಪ್ಪಿಕೊಂಡು ಜೀವಿಸಲಿ. ಆದಕ್ಕೆ ತಯಾರಿಲ್ಲ ಎಂದಾದರೆ ಪಾಕಿಸ್ತಾನಕ್ಕೆ ಹೋಗಲಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.

ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಉರ್ದು ಬೇಕು, ಹಿಜಾಬ್‌ ಬೇಕು, ಇಸ್ಲಾಂ ಧರ್ಮದ ಸಂಸ್ಕೃತಿ ಪಾಲಿಸಬೇಕು ಎಂದಾದರೆ ಅದಕ್ಕೆ ಪಾಕಿಸ್ತಾನವನ್ನು ಕೊಟ್ಟಿದ್ದೇವೆ. ಇಲ್ಲಿಯೇ ಇರಬೇಕಾದರೆ ದೇಶದ ಸಂವಿಧಾನ ಮತ್ತು ಸಂಸ್ಕೃತಿಯನ್ನು ಪಾಲಿಸಬೇಕು. ಹಿಜಾಬ್‌ ಧರಿಸಿಕೊಂಡು ಬರುವವರನ್ನು ಶಾಲೆಯಿಂದ ಹೊರಗೆ ಹಾಕಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.

‘ಇಂದು ಹಿಜಾಬ್ ಧರಿಸಲು ಅವಕಾಶ ನೀಡಿ ಎನ್ನುವವರು, ನಾಳೆ ಶಾಲೆಯಲ್ಲಿ ಮಸೀದಿ ಕಟ್ಟಬೇಕು ಎನ್ನುತ್ತಾರೆ. ಅಂತವರಿಗೆ ಬೆಂಬಲ ಕೊಡುವವರು ನಿಜವಾದ ದೇಶದ್ರೋಹಿಗಳು. ಇಂತಹ ಚಟುವಟಿಕೆಗಳನ್ನು ಯಾವುದೇ ಮುಲಾಜಿಲ್ಲದೆ ಹತ್ತಿಕ್ಕಬೇಕು. ರಾಜ್ಯದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ದೇಶವಿರೋಧಿ ಶಕ್ತಿಗಳ ಕೈವಾಡವಿದೆ’ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮತಾಂತರಗೊಂಡಿದ್ದಾರೆಯೇ?

‘ಸಿದ್ದರಾಮಯ್ಯ ಅವರು ಹಿಂದೂ ಆಗಿಯೇ ಇದ್ದಾರೆಯೇ ಅಥವಾ ಇಸ್ಲಾಂಗೆ ಮತಾಂತರಗೊಂಡಿದ್ದಾರೆಯೇ ಎಂಬ ಅನುಮಾನ ನನಗೆ ಕಾಡುತ್ತಿದೆ. ಪ್ರತಿಬಾರಿಯೂ ಮುಸ್ಲಿಮರ ಪರವಾಗಿ ಮಾತನಾಡುವುದು ಜಾತ್ಯಾತೀತರ ಲಕ್ಷಣವಲ್ಲ. ಜಾತ್ಯಾತೀತ ಎಂದರೆ ಎಲ್ಲ ಸಮಾಜದ ಭಾವನೆಗಳನ್ನು ಅರಿತುಕೊಂಡು ಕೆಲಸ ಮಾಡಬೇಕು. ಒಂದು ವರ್ಗವನ್ನು ಮೆಚ್ಚಿಸಿಕೊಂಡು ಕುಳಿತರೆ ದೇಶದ ಪರಿಸ್ಥಿತಿ ಏನಾಗಬೇಡ? ತಾಲಿಬಾನಿ ಸಂಸ್ಕೃತಿಯನ್ನು ತರುವ ಷಡ್ಯಂತ್ರಕ್ಕೆ ನಮ್ಮ ಪಕ್ಷ ಅವಕಾಶ ಕೊಡುವುದಿಲ್ಲ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.