ಚನ್ನಪಟ್ಟಣ: ‘ಮುಂದಿನ ಚುನಾವಣೆಯಲ್ಲೂ ಚನ್ನಪಟ್ಟಣ ದಿಂದಲೇ ಸ್ಪರ್ಧಿಸಿ ಇಲ್ಲಿಂದಲೇ ಗೆದ್ದು, ಈ ಜಿಲ್ಲೆಯಿಂದ ಮತ್ತೆ ಸಿಎಂ ಆಗುವ ನಂಬಿಕೆ ಇದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂಬ ಸುದ್ದಿಯ ಹಬ್ಬಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚನ್ನಪಟ್ಟಣ ಕ್ಷೇತ್ರವನ್ನು ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಚನ್ನಪಟ್ಟಣದ ಜನತೆ ಪ್ರೀತಿಯಿಂದ ನನ್ನನ್ನು ಶಾಸಕನಾಗಿ ಮಾಡಿದ್ದಾರೆ. ಈ ಕ್ಷೇತ್ರವನ್ನು ಬದಲಾವಣೆ ಮಾಡುವ ಯೋಚನೆ ಮಾಡುವುದಿಲ್ಲ’ ಎಂದರು.
‘ರಾಮನಗರ ಮತ್ತು ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ರಾಮನಗರ ಚನ್ನಪಟ್ಟಣ ಎರಡು ನನಗೆ ಒಂದೇ. ಚನ್ನಪಟ್ಟಣ ಬಿಟ್ಟು ಮಾಗಡಿಗೆ ಹೋಗುತ್ತೇನೆ ಎಂದು ಕೆಲವರು ಕತೆ ಕಟ್ಟಿ ಹಬ್ಬಿಸುತ್ತಿದ್ದಾರೆ. ಇದು ಕಟ್ಟುಕತೆ. ಮಾಗಡಿಯ ಶಾಸಕರು ಸಮರ್ಥರಿದ್ದಾರೆ. ಮಾಗಡಿ, ರಾಮನಗರ, ಚನ್ನಪಟ್ಟಣದಲ್ಲಿ ನಮ್ಮ ಪಕ್ಷ ಸದೃಢವಾಗಿದೆ. ಸಮರ್ಥ ಕಾರ್ಯಕರ್ತರ ಪಡೆಯಿದೆ’ ಎಂದರು.
ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಕುಮಾರಸ್ವಾಮಿ ಯವರು ಅಧಿಕಾರದಲ್ಲಿದ್ದಾಗ ಬಹಳ ಒಳ್ಳೆಯ ಕೆಲಸ
ಮಾಡಿದ್ದಾರೆ. ಆದರೆ ಅವರು ಮಾಡಿದ ಕೆಲಸ ಕಾರ್ಯಗಳು ಸರಿಯಾಗಿ ಪ್ರಚಾರ ವಾಗಲಿಲ್ಲ. ಆದರೆ ಮತ್ತೊಮ್ಮೆ ಕುಮಾರಸ್ವಾಮಿಯವರು ಸಿಎಂ ಆಗೋ ದಿನ ಬರುತ್ತದೆ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿಯವರು ಮಾತ್ರ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.