ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಮೀದ್ 1000 ಸೈಕ್ಲೋಥಾನ್ ಹಾಗೂ ಕೆಎಸ್ಆರ್ಪಿ ಸಹಯೋಗದಲ್ಲಿ ರಾಜ್ಯ ಪೊಲೀಸ್ ಇಲಾಖೆ ಡಿ.5 ರಿಂದ ಡಿ. 9ರವರೆಗೆ ಬೆಳಗಾವಿಯಿಂದ ಬೆಂಗಳೂರಿನವರೆಗೆ ‘ಮಹಿಳಾ ಪೊಲೀಸ್ ಸೈಕಲ್ ಯಾತ್ರೆ‘ ರ್ಯಾಲಿ ಆಯೋಜಿಸಿದೆ.
ರ್ಯಾಲಿ ಉದ್ದೇಶ?: ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಸ್ವಚ್ಛ ಭಾರತ, ಬಾಲ್ಯ ವಿವಾಹ ಪದ್ಧತಿಯಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ಪ್ರಮುಖವಾಗಿ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
‘ರ್ಯಾಲಿ ಸಾಗುವ ಮಾರ್ಗದಲ್ಲಿನ ಸರ್ಕಾರಿ ಮಹಿಳಾ ಕಾಲೇಜು, ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು' ಎಂದು ಕೆಎಸ್ಆರ್ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.
‘5ರಂದು ಬೆಳಗಾವಿಯಲ್ಲಿ ಆರಂಭವಾಗುವ ರ್ಯಾಲಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಚಾಲನೆ ನೀಡಲಿದ್ದಾರೆ. 9 ರಂದು ವಿಧಾನಸೌಧದ ಎದುರು ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವೆ ಜಯಮಾಲಾ, ಮೇಯರ್ ಗಂಗಾಂಬಿಕೆ ಪಾಲ್ಗೊಳ್ಳಲಿದ್ದಾರೆ’ ಎಂದರು.
**
ಅಂಕಿ–ಅಂಶಗಳು
100 - ರ್ಯಾಲಿಯಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆ
45 - ಮಹಿಳಾ ಪೊಲೀಸ್ ಸಿಬ್ಬಂದಿ
11 - ಮಹಿಳಾ ಪೊಲೀಸ್ ಅಧಿಕಾರಿಗಳು
4 - ಮಹಿಳಾ ಐಎಎಸ್ ಅಧಿಕಾರಿಗಳು
40 - ವಿವಿಧ ಸಂಘ ಸಂಸ್ಥೆಗಳಿಂದ ಪಾಲ್ಗೊಳ್ಳುವ ಮಹಿಳೆಯರ ಸಂಖ್ಯೆ
**
ದಿನಾಂಕ ಎಲ್ಲಿಂದ ಎಲ್ಲಿಯವರೆಗೆ ಪ್ರಯಾಣ (ದಿನಕ್ಕೆ) ಕಿ.ಮೀ.
ಡಿ.5 ಬೆಳಗಾವಿ–ಹುಬ್ಬಳ್ಳಿ 104
ಡಿ.6 ಹುಬ್ಬಳ್ಳಿ–ರಾಣೆಬೆನ್ನೂರು 111
ಡಿ.7 ರಾಣೆಬೆನ್ನೂರು–ಚಿತ್ರದುರ್ಗ 101
ಡಿ.8 ಚಿತ್ರದುರ್ಗ–ತುಮಕೂರು 136
ಡಿ.9 ತುಮಕೂರು–ಬೆಂಗಳೂರು 70
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.