ಬೆಂಗಳೂರು: ‘ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದ ನನ್ನನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರದ ಜನರು ಮನೆಯ ಮಗನಂತೆ ಆಶೀರ್ವದಿಸಿ, ಆಯ್ಕೆ ಮಾಡಿದ್ದರು. ಅವರ ನಿರೀಕ್ಷೆಯಂತೆ ಐದು ವರ್ಷ ಕೆಲಸ ಮಾಡಿದ್ದೇನೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಬಾರಿ ಪುನಃ ಸ್ಪರ್ಧಿಸಲು ಟಿಕೆಟ್ ಖಚಿತವಾಗುತ್ತಿದ್ದಂತೆ ಎಕ್ಸ್ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಪಕ್ಷದ ಹಿರಿಯ ನಾಯಕರು, ಕ್ಷೇತ್ರದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನನ್ನಂಥ ಯುವಕನಿಗೆ ಕಳೆದ ಐದು ವರ್ಷ ಅತ್ಯಂತ ಮಹತ್ವದ್ದಾಗಿತ್ತು. ಅನೇಕ ಹೊಸ ಕಲಿಕೆಗಳಿಗೆ ಒಡ್ಡಿಕೊಂಡಿದ್ದೇನೆ’ ಎಂದಿದ್ದಾರೆ.
‘ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ಹಿಂದಿನ ಅನುಭವದ ಆಧಾರದಲ್ಲಿ ಮುಂದಿನ ವರ್ಷಗಳಲ್ಲಿ ಬೆಂಗಳೂರು ಹಾಗೂ ರಾಜ್ಯದ ಪ್ರಗತಿಗೆ ಶ್ರಮಿಸುತ್ತೇನೆ. ಭಾರತಕ್ಕೆ ನರೇಂದ್ರ ಮೋದಿ ಅವರಂತಹ ದೂರದರ್ಶಿ, ಸದೃಢ ನಾಯಕನ ಅಗತ್ಯ ಇದೆ. ಅಮೃತಕಾಲಕ್ಕೆ ಅಡಿ ಇಡುತ್ತಿರುವ ಈ ಸಮಯದಲ್ಲಿ ಮತ್ತೊಮ್ಮೆ ಮೋದಿ ಅವರನ್ನು ದೇಶದ ಜನರು ಬೆಂಬಲಿಸಬೇಕಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.