ADVERTISEMENT

ಗುತ್ತಿಗೆ ಪದ್ಧತಿ ರದ್ದಾಗಲಿ, ಸಮಾನ ವೇತನ ಸಿಗಲಿ: ಕಾರ್ಮಿಕರ ಹಕ್ಕೊತ್ತಾಯ

ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 4:05 IST
Last Updated 20 ಡಿಸೆಂಬರ್ 2021, 4:05 IST
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಕಾರರು ಭಾನುವಾರ ಮೆರವಣಿಗೆ ನಡೆಸಿದರು   –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಕಾರರು ಭಾನುವಾರ ಮೆರವಣಿಗೆ ನಡೆಸಿದರು   –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಕಾರ್ಪೊರೇಟ್‌ ಮಾಲೀಕರ ಪರವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೈತ ವಿರೋಧಿ ಕೃಷಿ ಕಾಯ್ದೆಗಳ ರೀತಿಯಲ್ಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಭಾನುವಾರ ಪ್ರತಿಭಟನೆ ನಡೆಸಿದವು.

‘ಬೆವರಿನ ಪಾಲು, ಘನತೆಯ ಬಾಳು’ ಧ್ಯೇಯ ವಾಕ್ಯದೊಂದಿಗೆ ನಡೆದ ಕಾರ್ಮಿಕ ಹಕ್ಕೊತ್ತಾಯ ಸಮಾ
ವೇಶದ ಅಂಗವಾಗಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನ ದವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಮಿಕರು ಪಾಲ್ಗೊಂಡರು.

‘ಕಾರ್ಮಿಕರ ಐಕ್ಯ ಹೋರಾಟ ಚಿರಾಯುವಾಗಲಿ’, ‘ಗುತ್ತಿಗೆ ಪದ್ಧತಿ ಬೇಡವೇ ಬೇಡ’, ‘ಕಾರ್ಮಿಕ ವಿರೋಧಿ ಕಾಯ್ದೆಗಳು ರದ್ದಾಗಬೇಕು’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಹಾದಿಯಲ್ಲಿ ಹೋರಾಟದ ಗೀತೆಗಳು ಮೊಳಗಿದವು. ಕೆಂಪು ಹಾಗೂ ನೀಲಿ ಧ್ವಜಗಳೂ ರಾರಾಜಿಸಿದವು.

ADVERTISEMENT

ಕರ್ನಾಟಕ ಶ್ರಮಿಕ ಶಕ್ತಿಯ ರಾಜ್ಯ ಘಟಕದ ಅಧ್ಯಕ್ಷ ವರದರಾಜೇಂದ್ರ, ಟಿಯುಸಿಐ ರಾಜ್ಯ ಘಟಕದ ಅಧ್ಯಕ್ಷ ಆರ್‌.ಮಾನಸಯ್ಯ ಮಾತನಾಡಿದರು. ಕಾರ್ಮಿಕ ಮುಖಂಡರಾದ ಬಾಲನ್‌, ಎಸ್‌.ವೆಂಕಟೇಶ್ವರ ರಾವ್‌, ನೂರ್‌ ಶ್ರೀಧರ್‌, ಸುದೇಶ್‌, ಕೈಲಾಶ್‌, ಸಿದ್ಧಾಂತ್‌, ಮೋಹನ್‌ಕುಮಾರ್‌, ಚನ್ನಮ್ಮ, ಸುಷ್ಮಾ ವರ್ಮ ಇದ್ದರು.

ಕಾರ್ಮಿಕರ ಹಕ್ಕೊತ್ತಾಯಗಳು
lಬಳ್ಳಾರಿ ಜಿಲ್ಲೆಯ ಗಣಿ ಕಾರ್ಮಿಕರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಬೇಕು

lಯರಮರಸ್‌ ಉಷ್ಣ ವಿದ್ಯುತ್‌ ಸ್ಥಾವರದ ಕಾರ್ಮಿಕರಿಗೆ ಶಾಸನಬದ್ಧ ಸೌಲಭ್ಯ ಕಲ್ಪಿಸಬೇಕು

lಎಲ್ಲಾ ನೀರಾವರಿ ಯೋಜನೆಗಳ ಕಾರ್ಮಿಕರ ಬಾಕಿ ವೇತನ ಪಾವತಿಸಬೇಕು.

lಬೆಂಗಳೂರು ಜಲಮಂಡಳಿ, ಬಿಬಿಎಂಪಿ ಮತ್ತು ರೇಸ್‌ ಕೋರ್ಸ್‌ಗಳಲ್ಲಿನ ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ, ಗ್ರಾಚ್ಯುಟಿ, ಆರೋಗ್ಯ ವಿಮೆ ಮತ್ತು ಕೆಲಸದ ಭದ್ರತೆ ಒದಗಿಸಬೇಕು

lನೇಕಾರರಿಗೆ, ಹಮಾಲಿಗಳಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.