ಕಲಬುರ್ಗಿ: ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ (87) ಶನಿವಾರ ರಾತ್ರಿ ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ, ಯಾನಾಗುಂದಿ ಆಶ್ರಮದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.
ಪ್ರತಿ ವರ್ಷ ಶಿವರಾತ್ರಿಯ ದಿನ ಗುಹೆಯಿಂದ ಹೊರಬಂದು, ಭಕ್ತರಿಗೆ ದರ್ಶನ ನೀಡುತ್ತಿದ್ದರು. ಅವರ ದರ್ಶನ ಪಡೆಯಲು ರಾಜ್ಯ ಮತ್ತು ಹೊರರಾಜ್ಯಗಳ ಅಪಾರ ಸಂಖ್ಯೆಯ ಭಕ್ತರು ಸೇರುತ್ತಿದ್ದರು.ಈ ಶಿವರಾತ್ರಿಯ ದಿನ ಅವರನ್ನು ಸ್ಟೇಚರ್ನಲ್ಲಿ ಕರೆತಂದು ಭಕ್ತರಿಗೆ ಅವರ ಪಾದಗಳ ದರ್ಶನ ಕೊಡಿಸಲಾಗಿತ್ತು.
‘ಮಾ.8ರಂದು ಭಾನುವಾರ ಆಶ್ರಮದಲ್ಲಿಯೇ ಅವರ ಪಾರ್ಥಿವ ಶರೀರದ ದರ್ಶನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗುವುದು. ದೇಶದ ಬೇರೆ ಬೇರೆ ಭಾಗದಿಂದ ಭಕ್ತರು ಬರುವ ಸಾಧ್ಯತೆ ಇರುವುದರಿಂದ 2–3 ದಿನ ಬಿಟ್ಟು ಅಂತ್ಯಸಂಸ್ಕಾರ ನೆರವೇರಿಸುವ ಬಗ್ಗೆ ನಂತರ ನಿರ್ಧರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದರು.
ಇದನ್ನೂ ಓದಿ...ಮಾತೆ ಮಾಣಿಕೇಶ್ವರಿ ಎಂಬ 'ಶಕ್ತಿ'
ವೀರಧರ್ಮಜ ಮಾತಾ ಮಾಣಿಕೇಶ್ವರಿ ಅಮ್ಮನವರ ಅಂತಿಮ ದರ್ಶನಕ್ಕೆ ಸೂರ್ಯನಂದಿ ಬೆಟ್ಟದಲ್ಲಿ ಸಿದ್ಧತೆ ಆರಂಭವಾಗಿದ್ದು,ಆಶ್ರಮದಲ್ಲಿ ಆಖಂಡ ಭಜನೆ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ತೆಲಂಗಾಣ ಹಾಗೂಕರ್ನಾಟಕ ಪೊಲೀಸ್ ಅಧಿಕಾರಿಗಳಿಂದ ಬೆಟ್ಟಕ್ಕೆ ಭೇಟಿ ನೀಡಿಬಂದೋಬಸ್ತ್ ಕುರಿತು ಚರ್ಚೆ ನಡೆಸಿದ್ದಾರೆ.
ಮಾತೆಯವರು ಇನ್ನಿಲ್ಲದ ಸುದ್ದಿ ತಿಳಿದು ಗುರಮಠಕಲ್ ತಾಲೂಕಿನ ಗ್ರಾಮೀಣ ಭಾಗದಿಂದ ಜನತೆ ಬೆಟ್ಟಕ್ಕೆ ದೌಡಾಯಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.