ADVERTISEMENT

ಯಡಿಯೂರಪ್ಪ ಅನರ್ಹರಿಗಷ್ಟೇ ಮುಖ್ಯಮಂತ್ರಿನಾ: ಮಾಜಿ ಸಿಎಂ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 15:19 IST
Last Updated 25 ನವೆಂಬರ್ 2019, 15:19 IST
   

ಹೊಸಪೇಟೆ: ‘ಬಿ.ಎಸ್‌. ಯಡಿಯೂರಪ್ಪನವರು ಅನರ್ಹ ಶಾಸಕರಿಗಷ್ಟೇ ಮುಖ್ಯಮಂತ್ರಿನಾ’

ಹೀಗೆಂದು ಪ್ರಶ್ನಿಸಿದವರು ಜೆ.ಡಿ.ಎಸ್‌. ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ.

ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಸೋಮವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನ ಪ್ರಾಣ ಕೊಟ್ಟಾದರೂ ಎಲ್ಲಾ ಅನರ್ಹ ಶಾಸಕರನ್ನು ಗೆಲ್ಲಿಸಿ, ಉಳಿಸಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ನೆರೆಯಿಂದ ಸಾಕಷ್ಟು ಜನ ನೋವು ಅನುಭವಿಸುತ್ತಿದ್ದರೂ ಅವರ ಬಗ್ಗೆ ಒಂದು ದಿನವೂ ಈ ರೀತಿಯ ಕನಿಕರದ ಮಾತುಗಳನ್ನು ಆಡಿಲ್ಲ. ಅವರು ರಾಜ್ಯದ ಆರುವರೆ ಕೋಟಿ ಜನರ ಮುಖ್ಯಮಂತ್ರಿನಾ ಅಥವಾ ಅನರ್ಹರಿಗಷ್ಟೇನಾ ಎಂಬುದನ್ನು ತಿಳಿಸಬೇಕು’ ಎಂದರು.

ADVERTISEMENT

‘ಹುಣಸೂರಿನಲ್ಲಿ ಶ್ರೀರಾಮುಲು ಅವರು ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿರುವುದರ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲ ಸಾಮಾನ್ಯ. ದೇವೇಗೌಡರು ವಯಸ್ಸಿನಲ್ಲಿ ನನಗಿಂತಲೂ ಹಿರಿಯರು. ಅವರ ನಡವಳಿಕೆ ಸಾರ್ವಜನಿಕ ಜೀವನದಲ್ಲಿ ಜನರ ಸಂಶಯಕ್ಕೆ ಎಡೆಮಾಡಿಕೊಡಬಾರದು. ಅವರ ಮುಂದಿನ ಭವಿಷ್ಯಕ್ಕೆ ಮಾರಕವಾಗದಂತೆ ಅವರು ನಡೆದುಕೊಳ್ಳಬೇಕು’ ಎಂದರು.

‘ವಿಶ್ವನಾಥ್‌ ನನ್ನ ಬಗ್ಗೆ ಅರ್ಥವಿಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅವರಿಗೂ ನಮಗೂ ಯಾವುದೇ ಸಂಬಂಧ ಈಗಿಲ್ಲ. ಮುಂದಿನ ದಿನಗಳಲ್ಲಿ ಅವರು ರಾಜಕೀಯವಾಗಿ ನಗಣ್ಯ ಆಗುತ್ತಾರೆ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.