ಬೆಂಗಳೂರು: ‘ಕಾಂಗ್ರೆಸ್, ಜೆಡಿಎಸ್ ಬಗ್ಗೆ ಮಾತನಾಡುತ್ತ ಸಮಯ ವ್ಯರ್ಥ ಮಾಡುವುದಿಲ್ಲ. ಇನ್ನು ರಾಜ್ಯದಅಭಿವೃದ್ಧಿ ಹಾಗೂಪಕ್ಷ ಬಲಪಡಿಸುವ ಬಗ್ಗೆಯಷ್ಟೇ ನಮ್ಮ ಯೋಚನೆ’ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
15 ವಿಧಾನಸಭಾ ಕ್ಷೇತ್ರಗಳಲ್ಲಿ 12 ಸ್ಥಾನವನ್ನು ಗೆದ್ದು ಬಿಜೆಪಿ, ತನ್ನ ಸರ್ಕಾರವನ್ನು ಭದ್ರಪಡಿಸಿಕೊಂಡಿದೆ. ಚುನಾವಣಾ ಫಲಿತಾಂಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ ಮಾಡುವುದರಿಂದ ನಮಗೆ ಲಾಭವಿಲ್ಲ. ಸೋಲಿನ ಹೊಣೆಹೊತ್ತು ಅವರು ರಾಜೀನಾಮೆ ನೀಡುತ್ತಿದ್ದಾರೆ. ಅದು ಅವರ ಪಕ್ಷದ ಆಂತರಿಕವಿಷಯ ಅದರ ಬಗ್ಗೆ ನಾವು ತಲೆಕಡಿಸಿಕೊಳ್ಳಬೇಕಿಲ್ಲ’ ಎಂದರು.
‘ಸಾಮಾನ್ಯ ಜನರು ಕುಳಿತಲ್ಲಿ, ನಿಂತಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆಯೇ ಮಾತನಾಡುವಂತೆ ನಾವು ಕೆಲಸ ಮಾಡಬೇಕು. ನನ್ನ ಸಚಿವ ಸಂಪುಟ ಸದಸ್ಯರು ಈ ಬಗ್ಗೆ ಗಮನಕೊಡಬೇಕು’ ಎಂದು ಸಲಹೆ ನೀಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಈ ಚುನಾವಣೆ ಫಲಿತಾಂಶ ಏನಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದರು. ಬಹಳ ಖುಷಿಯಾಗಿರುವುದುಅವರ ಮಾತುಗಳಿಂದಲೇ ತಿಳಿದಿದೆ.ಸಾಮೂಹಿಕ ನೇತೃತ್ವವೇಈ ದೊಡ್ಡ ಗೆಲುವಿಗೆ ಕಾರಣ.ಉತ್ತರ ಕರ್ನಾಟಕ ಭಾಗದಲ್ಲಿ ಏಳಕ್ಕೆ ಏಳೂ ಸೀಟು ಗೆದ್ದಿದ್ದೇವೆ. ಈಗ ಅಲ್ಲಿಗೆ ಹೋಗಲು ಅವರಿಗೆ ಮುಖವಿಲ್ಲ’ ಎಂದು ತಿಳಿಸಿದರು.
‘ಬೆಂಗಳೂರಿನಲ್ಲಿ ಎಷ್ಟು ದೊಡ್ಡ ಅಂತರದಲ್ಲಿ ಗೆಲವು ಪಡೆದಿದ್ದೇವೆ. ರಾಜ್ಯ ರಾಜಧಾನಿ ಬಗ್ಗೆ ಇಡೀ ದೇಶದ ಗಮನವಿದೆ. ಇನ್ನು 3 ತಿಂಗಳಲ್ಲಿ ಇಲ್ಲಿನ ಸ್ಥಿತಿ ಪೂರ್ತಿ ಬದಲಾಗಬೇಕು. ಇದಕ್ಕೆ ಕಾರ್ಪೊರೇಟರ್ಗಳು ಸಾಕಷ್ಟು ಕೆಲಸ ಮಾಡಬೇಕು. ಇಲ್ಲಿ ಪ್ರಾಮಾಣಿಕತೆಯ ಕೊರತೆ ಇದೆ. ಅದು ಸರಿಯಾದರೆ, ಎಲ್ಲವೂ ಸರಿಯಾಗುತ್ತದೆ’ ಎಂದು ಕಿವಿ ಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.