ADVERTISEMENT

ಕುಡುಕ ಚಾಲಕರಿಗೆ ಯೋಗ ಚಿಕಿತ್ಸೆ

ಕೆಎಸ್‌ಆರ್‌ಟಿಸಿಯಿಂದ ಹೊಸ ಮಾರ್ಗೋಪಾಯ

ಶರತ್‌ ಹೆಗ್ಡೆ
Published 20 ಡಿಸೆಂಬರ್ 2018, 20:57 IST
Last Updated 20 ಡಿಸೆಂಬರ್ 2018, 20:57 IST
   

ಬೆಂಗಳೂರು: ಕುಡುಕ ಚಾಲಕರ ಪ್ರವೃತ್ತಿಗೆ ತಣ್ಣೀರು ಹಾಕಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ತಪಾಸಣೆ ಮತ್ತು ಶಿಸ್ತು ಕ್ರಮಗಳನ್ನು ಕಠಿಣಗೊಳಿಸಿರುವ ನಿಗಮ ಇದೀಗ ಆಪ್ತ ಸಮಾಲೋಚನೆ, ಯೋಗ ಚಿಕಿತ್ಸೆಯಂಥ ಮಾರ್ಗಗಳ ಮೊರೆ ಹೋಗಿದೆ.

ಹೆಚ್ಚು ಪ್ರಕರಣಗಳು ಕಂಡು ಬರುವ ವಿಭಾಗಗಳಲ್ಲಿ ಈ ಕ್ರಮವನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದುಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.

‘ಪಾನಮತ್ತರಾಗಿ ಬಸ್‌ ಚಾಲನೆ ಮಾಡುವವರ ತಪಾಸಣೆ ಪ್ರಮಾಣ ಮತ್ತು ಪ್ರಕರಣಗಳ ದಾಖಲೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ವರ್ಷಕ್ಕೆ ಸರಾಸರಿ 30ರಿಂದ 40ರ ಆಸುಪಾಸಿನಲ್ಲಿ ಇರುತ್ತಿದ್ದ ಈ ಪ್ರಕರಣಗಳು ಈಗ 89ರ ಗಡಿ ಸಮೀಪಿಸಿವೆ.2013ರಿಂದ ಈ ವರ್ಷದ ಅಕ್ಟೋಬರ್‌ವರೆಗೆ ಒಟ್ಟು 287 ಮದ್ಯ ಸೇವನೆ ಪ್ರಕರಣಗಳು ದೃಢಪಟ್ಟಿವೆ. ಅವರನ್ನು ವಿಚಾರಣೆಗೊಳಪಡಿಸಿ ಕ್ರಮ ಜರುಗಿಸಲಾಗಿದೆ’ ಎನ್ನುತ್ತಾರೆ ನಿಗಮದ ಅಧಿಕಾರಿಗಳು.

ADVERTISEMENT

ಮಿತಿಮೀರಿದ ಕೆಲಸದ ಒತ್ತಡ, ಅನನುಕೂಲವೆನಿಸುವ ಕರ್ತವ್ಯದ ಸ್ಥಳ ಮತ್ತು ವೇಳೆ, ಕುಟುಂಬದಿಂದ ದೂರ ಇರುವುದು ಮತ್ತು ಸಹವಾಸ ದೋಷ ಇಂಥ ಪ್ರವೃತ್ತಿಗಳಿಗೆ ಕಾರಣ ಎಂದು ಸಿಬ್ಬಂದಿಯೇ ಸೂಕ್ಷ್ಮವಾಗಿ ಒಪ್ಪಿಕೊಳ್ಳುತ್ತಾರೆ.

‘ಶಿಕ್ಷೆ ವಿಧಿಸಿ ಕೈತೊಳೆದುಕೊಳ್ಳುವ ಬದಲು ಒಂದಿಷ್ಟು ಆಪ್ತ ಸಮಾಲೋಚನೆ, ವಿರಾಮದ ಅವಧಿ ಹೆಚ್ಚಳ, ಆರೋಗ್ಯ ತಪಾಸಣೆ ಇತ್ಯಾದಿ ಕ್ರಮಗಳನ್ನೂ ಕೈಗೊಂಡರೆ ಈ ಪ್ರವೃತ್ತಿಯನ್ನು ಕಡಿಮೆ ಮಾಡಬಹುದು’ ಎಂದು ಸಂಸ್ಥೆಯ ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ ವಿಭಾಗದ ಮೂಲಗಳು ಹೇಳುತ್ತವೆ.

ನಿಗಮದ ಕ್ರಮವೇನು?: ಆಡಳಿತ ನಿರ್ದೇಶಕರು ಹೇಳುವ ಪ್ರಕಾರ, ‘ತಪಾಸಣೆ ಸಂಖ್ಯೆಗೆ ಹೋಲಿಸಿದರೆ ಪ್ರಕರಣಗಳ ಶೇಕಡಾವಾರು ಪ್ರಮಾಣ ಸಾಕಷ್ಟು ಇಳಿಮುಖವಾಗಿದೆ. ಹಾಗೆಂದು ಪತ್ತೆಯಾಗುವ ಪ್ರಕರಣಗಳನ್ನು ನಿರ್ಲಕ್ಷಿಸುವಂತಿಲ್ಲ. ಸಿಬ್ಬಂದಿ ಏಕೆ ಇಂಥ ಚಟಗಳಿಗೆ ಬಲಿಯಾಗುತ್ತಾರೆ ಎಂಬುದನ್ನೂ ಕಂಡುಹಿಡಿಯಬೇಕು. ಅಂಥವರನ್ನು ಕುಟುಂಬ ಸಮೇತ ಕರೆಸಿ ಆಪ್ತ ಸಮಾಲೋಚನೆಗೆ ನಡೆಸಲಾಗುತ್ತದೆ. ಅಗತ್ಯಬಿದ್ದರೆ ಚಿಕಿತ್ಸೆ ಕೊಡಿಸಲಾಗುತ್ತದೆ’ ಎಂದರು.

**

ವರ್ಷ: ಪ್ರಕರಣಗಳು

2013–14:33

2014–15: 37

2015–16: 22

2016–17: 65

2017–18: 89

ಏ. 2018–ಅ. 2018:41
ಒಟ್ಟು: 287

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.