ADVERTISEMENT

ಕ್ಷಾಮದಿಂದ ಸಿಂಧೂ ನಾಗರಿಕತೆ ಅಳಿವು?

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಲಂಡನ್‌ (ಪಿಟಿಐ): ವಾಯವ್ಯ ಭಾರತ­ದಲ್ಲಿ ಹಠಾತ್ತಾಗಿ ಮುಂಗಾರು ದುರ್ಬಲ­ ಗೊಂಡದ್ದೇ 4,000 ವರ್ಷಗಳ ಹಿಂದೆ ಸಿಂಧೂ ಕಣಿವೆ ನಾಗರಿಕತೆ ಕುಸಿ­ಯಲು ಕಾರಣ ಎಂದು ಪ್ರಾಚೀನ ನಾಗ­ರಿ­ಕತೆ­ಗಳ ಮೇಲೆ ಹವಾ­ಮಾನ ಬದಲಾ­ವ­­ಣೆಯ ಪರಿಣಾಮ­ಗಳ ಬಗೆಗಿನ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.

ಸಿಂಧೂ ಕಣಿವೆ ನಗರೀಕರಣ­ಗೊ­ಳ್ಳುತ್ತಿದ್ದ ಆರಂಭಿಕ ದಿನ­ಗಳಲ್ಲಿ ಮುಂಗಾರು ದುರ್ಬಲಗೊಂಡಿದ್ದ­ರಿಂದಾಗಿ ತೀವ್ರ ಕ್ಷಾಮ ಉಂಟಾಯಿತು. 
ಈಶಾನ್ಯ ಭಾರತದ ಮೇಘಾಲಯ, ಒಮಾನ್‌ ಮತ್ತು ಅರಬ್ಬಿ ಸಮುದ್ರಗಳ ಪುರಾವೆಗಳನ್ನೂ ಒಟ್ಟಾಗಿ ಇಟ್ಟು ನೋಡಿ­ದಾಗ ಭಾರತದ ದೊಡ್ಡ ಭೂ­ಪ್ರದೇಶ­ದಲ್ಲಿ ಮುಂಗಾರು ದುರ್ಬಲ­ಗೊಂಡಿ­ರುವುದು ದೃಢವಾಗುತ್ತದೆ ಎಂದು ಕೇಂಬ್ರಿಜ್‌ ವಿಶ್ವವಿದ್ಯಾಲಯದ ಭೂ­ವಿಜ್ಞಾನ ವಿಭಾಗದ ಡೇವಿಡ್‌ ಹೊಡೆಲ್‌ ಹೇಳಿದ್ದಾರೆ.

ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದ ಜನರು ಚದುರಿ ಹೋಗಿರುವುದು ನಿಜ. ಆದರೆ ಯಾವುದಾದರೂ ಒಂದೇ ಕಾರಣ­­­ದಿಂದ ಹಾಗೆ ಆಗಿರಬಹುದು ಎಂದು ಹೇಳುವುದು ಅಸಾಧ್ಯ. ಆದರೆ ಹವಾ­ಮಾನ ಬದಲಾವಣೆ ಒಂದು ಮುಖ್ಯ­ವಾದಕಾರಣವಂತೂ ಹೌದು ಎಂದು ಅವರು ವಿಶ್ಲೇಷಿಸಿದ್ದಾರೆ.

ಬ್ರಿಟನ್‌– ಭಾರತ ಶಿಕ್ಷಣ ಮತ್ತು ಸಂಶೋಧನಾ ಉಪಕ್ರಮ ಈ ಅಧ್ಯಯನಕ್ಕೆ ಅನುದಾನ ಒದಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.