ADVERTISEMENT

ಪಾಕ್‌ ಉಗ್ರರಿಂದಲೇ ಮುಂಬೈ ದಾಳಿ: ನವಾಜ್‌ ಷರೀಫ್‌

ಪಿಟಿಐ
Published 12 ಮೇ 2018, 17:11 IST
Last Updated 12 ಮೇ 2018, 17:11 IST
ನವಾಜ್‌ ಷರೀಫ್
ನವಾಜ್‌ ಷರೀಫ್   

ಲಾಹೋರ್‌: ‘ಮುಂಬೈನಲ್ಲಿ 2008ರ ನವೆಂಬರ್‌ 26ರಂದು ಪಾಕಿಸ್ತಾನದ ಭಯೋತ್ಪಾದಕರೇ ದಾಳಿ ನಡೆಸಿದ್ದರು’ ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಒಪ್ಪಿಕೊಂಡಿದ್ದಾರೆ.

‘ಸರ್ಕಾರೇತರ ಶಕ್ತಿಗಳು ಎಂದು ಕರೆಯಬಹುದಾದ ಭಯೋತ್ಪಾದಕ ಸಂಘಟನೆಗಳು ಗಡಿ ದಾಟಿ ಮುಂಬೈನಲ್ಲಿ ಸುಮಾರು 150 ಮಂದಿಯನ್ನು ಹತ್ಯೆ ಮಾಡಬಹುದೇ? ಇಂತಹ ನೀತಿಗೆ ಅವಕಾಶ ನೀಡಿರುವುದು ಸರಿಯೇ? ಈ ಬಗ್ಗೆ ನನಗೆ ವಿವರ ನೀಡಿ. ನಾವು ಈ ಪ್ರಕರಣದ ವಿಚಾರಣೆಯನ್ನು ಏಕೆ ಮುಕ್ತಾಯಗೊಳಿಸುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಭಯೋತ್ಪಾದಕರು ಗಡಿ ದಾಟಿ ವಿಧ್ವಂಸಕ ಕೃತ್ಯ ನಡೆಸುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸಹ ಈ ಬಗ್ಗೆ ಹೇಳಿಕೆ ನೀಡಿದ್ದಾರೆ’ ಎಂದು ’ಡಾನ್‌’ ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

ರಾವಲ್ಪಿಂಡಿಯ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ.

ಸೇನೆ ಮತ್ತು ನ್ಯಾಯಾಂಗದ ಬಗ್ಗೆ ಮಾತನಾಡಿರುವ ಷರೀಫ್‌, ’ಪರ್ಯಾಯವಾಗಿ ಎರಡು ಅಥವಾ ಮೂರು ಸರ್ಕಾರಗಳೊಂದಿಗೆ ದೇಶದ ಆಡಳಿತ ನಡೆಸಲು ಸಾಧ್ಯವಿಲ್ಲ. ಇಂತಹ ವ್ಯವಸ್ಥೆಯನ್ನು ಮೊದಲು ನಿಲ್ಲಿಸಬೇಕು. ದೇಶದಲ್ಲಿ ಒಂದೇ ಸರ್ಕಾರ ಮತ್ತು ಒಂದೇ ಸಂವಿಧಾನ ಇರಬೇಕು’ ಎಂದು ಪ್ರತಿಪಾದಿಸಿದ್ದಾರೆ.

ಪಾಕ್‌ನಲ್ಲಿ ಉಗ್ರರು ಕ್ರಿಯಾಶೀಲ

‘ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಘಟನೆಗಳು ಕ್ರಿಯಾಶೀಲವಾಗಿವೆ’ ಎಂದು ನವಾಜ್‌ ಷರೀಫ್‌ ಅವರು ಇದೇ ಮೊದಲ ಬಾರಿಒಪ್ಪಿಕೊಂಡಿದ್ದಾರೆ.

’ಪಾಕಿಸ್ತಾನವನ್ನು ಏಕಾಂಗಿ ರಾಷ್ಟ್ರವನ್ನಾಗಿ ನಾವೇ ಮಾಡಿಕೊಂಡಿದ್ದೇವೆ. ನಾವು ಸಾಕಷ್ಟು ತ್ಯಾಗ ಮಾಡಿದ್ದರೂ ನಮ್ಮ ಹೇಳಿಕೆಗಳನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ. ಅಫ್ಗಾನಿಸ್ತಾನದ ಹೇಳಿಕೆಗಳನ್ನು ಒಪ್ಪಿಕೊಳ್ಳಲಾಗುತ್ತಿದೆ. ಆದರೆ, ನಮ್ಮನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ ಎನ್ನುವುದು ಆತಂಕದ ಸಂಗತಿ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.