ಢಾಕಾ: ಈಶಾನ್ಯ ಬಾಂಗ್ಲಾದಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಭೂಕುಸಿತ ಉಂಟಾಗಿ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ 53 ಜನ ಸಾವಿಗೀಡಾಗಿದ್ದಾರೆ.
ಭೂಕುಸಿತದಿಂದ ಭಾರೀ ಮಣ್ಣಿನಡಿ ಹಲವು ಜನ ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಬಾಂಗ್ಲಾದ ಈಶಾನ್ಯ ಭಾಗದ ರಂಗಮಾಟಿ ಜಿಲ್ಲೆಯಲ್ಲಿ ಉಂಟಾಗಿರುವ ಭೂಕುಸಿತದಿಂದ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ ಅತಿ ಹೆಚ್ಚು 36 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸೇನೆಯ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ ಹಾಗೂ ಇತರ ಹಲವರು ಗಾಯಗೊಂಡಿದ್ದಾರೆ ಎಂದು ಢಾಕಾದಲ್ಲಿನ ಸೇನಾ ವಕ್ತಾರರು ಖಚಿತಪಡಿಸಿದ್ದಾರೆ.
ಭೂ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿದಿದ್ದು, ಸೇನೆಯ ರಕ್ಷಣಾ ಸಿಬ್ಬಂದಿ ಇಡೀ ರಾತ್ರಿ ಮಣ್ಣು ತೆರವುಗೊಳಿಸುವಲ್ಲಿ ತೊಡಗಿದ್ದರು. ನಗರಕ್ಕೆ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಭಾರೀ ಮಣ್ಣು ಬಿದ್ದಿರುವುದು ಮತ್ತು ಮಳೆ ಬರುತ್ತಿರುವುದು ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ರಂಗಮಾಟಿ, ಬಂಡರಾಬಾನ್ ಮತ್ತು ಚಿತ್ತಗಾಂಗ್ ಜಿಲ್ಲೆಗಳಲ್ಲಿ 53 ಜನ ಸಾವೀಗೀಡಾಗಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.