ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಭೂಕುಸಿತ: 10 ಮಂದಿ ಬಲಿ
ಬೀಜಿಂಗ್ (ಐಎಎನ್‌ಎಸ್): ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಹತ್ತು ಮಂದಿ ಮೃತಪಟ್ಟು, 22 ಮಂದಿ ಕಾಣೆಯಾಗಿರುವ ಘಟನೆ ವಾಯವ್ಯ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಭಾನುವಾರ ಸಂಭವಿಸಿದೆ. ಕಾಣೆಯಾಗಿರುವವರ ಪತ್ತೆಗೆ ರಕ್ಷಣಾ ತಂಡ ಶ್ರಮಿಸುತ್ತಿದೆ ಎಂದು ಶಾಂಕ್ಸಿ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ನದಿಗೆ ಉರುಳಿ 11 ಸಾವು
ಕಠ್ಮಂಡು (ಪಿಟಿಐ): ಬಸ್ಸೊಂದು ನದಿಗೆ ಉರುಳಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಹನ್ನೊಂದು ಮಂದಿ ಮೃತಪಟ್ಟು, ಇತರ ಎಂಟು ಮಂದಿ ಗಾಯಗೊಂಡ ಘಟನೆ ವಾಯವ್ಯ ನೇಪಾಳದಲ್ಲಿ ಭಾನುವಾರ ನಡೆದಿದೆ.

ಬಸ್ ಜಿಲ್ಲಾ ಕೇಂದ್ರವಾದ ಬೇನಿಯಿಂದ ದರ್ಬಾಂಗ್ ಬರುತ್ತಿದ್ದ ವೇಳೆ ಸುಮಾರು 200ಅಡಿ ಆಳಕ್ಕೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಟೊ ದಾಳಿಗೆ 18 ಉಗ್ರರ ಬಲಿ
ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನದ ನೂರಿಸ್ತಾನ್ ಪ್ರಾಂತ್ಯದಲ್ಲಿರುವ ತಾಲಿಬಾನ್ ಉಗ್ರರ ತಾಣಗಳ ಮೇಲೆ ನ್ಯಾಟೊ ಪಡೆ ನಡೆಸಿದ ವಿಮಾನ ದಾಳಿಯಲ್ಲಿ 18 ಉಗ್ರರು ಹತ್ಯೆಯಾಗಿ,15ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ  ಭಾನುವಾರ ಸಂಭವಿಸಿದೆ.

ನೂರಿಸ್ತಾನ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಬೀಡುಬಿಟ್ಟಿರುವ ಖಚಿತ ಮಾಹಿತಿ ದೊರೆತೆ ಮೇಲೆ ನ್ಯಾಟೊ ಪಡೆಗಳು ದಾಳಿ ನಡೆಸಿವೆ ಎಂದು ಪೊಲೀಸ್ ಮುಖ್ಯಸ್ಥ ಜಹೀದ್ ಅವರು ತಿಳಿಸಿದ್ದಾರೆ. ದಾಳಿಯಲ್ಲಿ ಯಾವುದೇ ನಾಗರಿಕರು ಗಾಯಗೊಂಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಅಪಘಾತ: 7ಮಂದಿ ಸಾವು
ಬೀಜಿಂಗ್ (ಐಎಎನ್‌ಎಸ್): ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ಏಳು ಮಂದಿ ಸತ್ತು, 30ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಚೀನಾದ ಸಿಚೂವಾನ್ ಪ್ರಾಂತ್ಯದಲ್ಲಿ ಭಾನುವಾರ ಸಂಭವಿಸಿದೆ. ಈ ಬಸ್‌ನಲ್ಲಿ ಪ್ರವಾಸಿಗರು ಪ್ರಯಾಣಿಸುತ್ತಿದ್ದು, ಗಾಯಗೊಂಡವರನ್ನು ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

ಸತ್ತವರ ಸಂಖ್ಯೆ 9ಕ್ಕೆ ಏರಿಕೆ
ಲಾಸ್ ಏಂಜಲೀಸ್ (ಎಎಫ್‌ಪಿ): ಅಮೆರಿಕದ ನೆವಾಡದ ರೆನೊದಲ್ಲಿ ಶನಿವಾರ ವೈಮಾನಿಕ ಪ್ರದರ್ಶನ ಸಂದರ್ಭದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸತ್ತವರ ಸಂಖ್ಯೆ 9ಕ್ಕೆ ಏರಿದೆ. ಈ ದುರಂತದಲ್ಲಿ ಗಾಯಗೊಂಡಿದ್ದ 50ಕ್ಕೂ ಅಧಿಕ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ 2ನೇ ಮಹಾಯುದ್ಧದಲ್ಲಿ ಬಳಕೆಯಾದ ವಿಮಾನವೊಂದು ಪೈಲಟ್ ನಿಯಂತ್ರಣ ಕಳೆದುಕೊಂಡು ದುರಂತಕ್ಕೀಡಾಗಿತ್ತು.

`ಮ್ಯಾನ್ಮಾರ್‌ನಲ್ಲಿ ಗುಣಾತ್ಮಕ ಬದಲಾವಣೆ~
ಯಾಂಗೂನ್ (ಎಎಫ್‌ಪಿ): ಮ್ಯಾನ್ಮಾರ್‌ನಲ್ಲಿ ಕೊನೆಗೂ ರಾಜಕೀಯ ಬದಲಾವಣೆಯ ಸೂಚನೆಗಳು ಕಾಣುತ್ತಿವೆ ಎಂದಿರುವ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ, ` ಈ ಬೆಳವಣಿಗೆಯ ಹೊರತಾಗಿಯೂ ಇಲ್ಲಿನ ಜನರಿಗೆ ಸ್ವಾತಂತ್ರ್ಯ ಗಗನ ಕುಸುಮವಾಗಿಯೇ ಉಳಿದಿದೆ~ ಎಂದು ವಿಷಾದಿಸಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT