ಕೊಲಂಬೊ: ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿರುವ ಕಾರಣ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ತಾತ್ಕಾಲಿಕವಾಗಿ ಸಂಸತ್ತನ್ನು ಅಮಾನತುಗೊಳಿಸಿದ್ದಾರೆ. ಸಂವಿಧಾನದ ಕಲಂ 70ರ ಅನುಸಾರ ತಮ್ಮ ಅಧಿಕಾರ ಬಳಸಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
‘ಏಪ್ರಿಲ್ 12ರ ಮಧ್ಯರಾತ್ರಿಯಿಂದ ಮೇ 8ರವರೆಗೆ ಅಂದರೆ ಮುಂದಿನ ಅಧಿವೇಶನ ಆರಂಭವಾಗುವವರೆಗೆ ಸಂಸತ್ತು ಅಮಾನತ್ತಿನಲ್ಲಿ ಇರಲಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಧಾನಿ ರನಿಲ್ ವಿಕ್ರಂ ಸಿಂಘೆ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ಗೊತ್ತುವಳಿ ಪರವಾಗಿ ಮತ ಚಲಾಯಿಸಿದ್ದ ಮೈತ್ರಿ ಸರ್ಕಾರದ ಆರು ಸಚಿವರು ಗುರುವಾರ ತಡರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಮೈತ್ರಿಕೂಟ ಸೋಲು ಅನುಭವಿಸಿತು. ಹೀಗಾಗಿ ಕೂಡಲೇ ರಾಜೀನಾಮೆ ನೀಡುವಂತೆ ಪ್ರಧಾನಿ ವಿಕ್ರಂ ಸಿಂಘೆ ಅವರಿಗೆ ಮೈತ್ರಿಪಾಲ ಸೂಚಿಸಿದ್ದರು. ಆದರೆ, ರಾಜೀನಾಮೆ ನೀಡಲು ಅವರು ಒಪ್ಪದ ಕಾರಣ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.
* ಮೈತ್ರಿಪಾಲ ನೇತೃತ್ವದ ಒಕ್ಕೂಟ ಸರ್ಕಾರದಿಂದ ಹೊರನಡೆಯುವ ಬಗ್ಗೆ ಎಸ್ಎಲ್ಎಫ್ಪಿ ಶೀಘ್ರ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.